ನವದೆಹಲಿ: ನವದೆಹಲಿಯಲ್ಲಿ ಭಾರತ–ಜಪಾನ್ ರಕ್ಷಣಾ ಸಚಿವರ ಸಭೆ ನಡೆಯುತ್ತಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಜಪಾನ್ನ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರು ಸಭೆಯ ಸಹಅಧ್ಯಕ್ಷತೆ ವಹಿಸಿದ್ದಾರೆ.
ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವುದು, ಕಾರ್ಯತಂತ್ರದ ವಿಶ್ವಾಸ ಮತ್ತು ಸಹಕಾರವನ್ನು ಹೆಚ್ಚಿಸುವುದು ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸುವ ಕುರಿತು ಸಭೆಯಲ್ಲಿ ಪ್ರಮುಖ ಚರ್ಚೆಗಳು ನಡೆಯುವ ನಿರೀಕ್ಷೆಯಿದೆ.
ಸಮುದ್ರ ಭದ್ರತೆಗೆ ಹೆಚ್ಚಿನ ಒತ್ತು
ಸಭೆಯಲ್ಲಿ ಉಭಯ ಸಚಿವರು ಸಮುದ್ರ ಭದ್ರತಾ ಸಹಕಾರವನ್ನು ಮತ್ತಷ್ಟು ಆಳಗೊಳಿಸುವ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಬದಲಾಗುತ್ತಿರುವ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವಿನ ರಕ್ಷಣಾ ಸಹಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.
ಇದರ ಜೊತೆಗೆ, ‘ಮೇಕ್ ಇನ್ ಇಂಡಿಯಾ’ ಚೌಕಟ್ಟಿನಡಿ ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.
ಜಪಾನ್ ತನ್ನ ರಕ್ಷಣಾ ಉಪಕರಣಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಕುರಿತ ಮೂರು ತತ್ವಗಳನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವೆ ರಕ್ಷಣಾ ಉತ್ಪಾದನೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಹೊಸ ಅವಕಾಶಗಳನ್ನು ಗುರುತಿಸುವ ನಿರೀಕ್ಷೆಯಿದೆ.
ದ್ವಿಪಕ್ಷೀಯ ರಕ್ಷಣಾ ಸಹಕಾರಕ್ಕೆ ಹೊಸ ಮಾರ್ಗಸೂಚಿ
ಭಾರತ–ಜಪಾನ್ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅಗತ್ಯವಾದ ಮಾರ್ಗಸೂಚಿಯನ್ನು ರೂಪಿಸಲು ಈ ಸಭೆ ಮಹತ್ವದ ವೇದಿಕೆಯಾಗಲಿದೆ.
ಸಭೆಗೆ ಮುನ್ನ ಇಂದು ಬೆಳಗ್ಗೆ ಜಪಾನ್ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಪುಷ್ಪಗುಚ್ಛ ಸಮರ್ಪಿಸಿ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿದರು.


