ನವದೆಹಲಿ: ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿ (CCRAS) ತನ್ನ 5ನೇ ಕಾರ್ಯಕಾರಿ ಸಮಿತಿ ಸಭೆಯನ್ನು ನವದೆಹಲಿಯಲ್ಲಿ ಆಯೋಜಿಸಿ, ಆಯುರ್ವೇದ ಶಿಕ್ಷಣ, ಸಂಶೋಧನೆ, ವೈಜ್ಞಾನಿಕ ಸಂವಹನ ಹಾಗೂ ಡಿಜಿಟಲ್ ಆಡಳಿತಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮೂರು ಮಹತ್ವದ ಹೊಸ ಸಂಶೋಧನಾ ಉಪಕ್ರಮಗಳಿಗೆ ಚಾಲನೆ ನೀಡಿದೆ.
ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದ್ಯ ರಾಜೇಶ್ ಕೋಟೇಚಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ದೇಶದಲ್ಲಿ ಸಾಕ್ಷ್ಯಾಧಾರಿತ (Evidence-based) ಆಯುರ್ವೇದ ಸಂಶೋಧನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜೇಶ್ ಕೋಟೇಚಾ, ಆಯುರ್ವೇದ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆ, ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಅಭಿವೃದ್ಧಿಗೆ CCRAS ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದು ಹೇಳಿದರು. ರಾಷ್ಟ್ರೀಯ ಸಂಶೋಧನಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮಂಡಳಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಉತ್ಸಾಹದಿಂದ ನವೀನತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ CCRAS ಮಹಾನಿರ್ದೇಶಕ ಪ್ರೊ. ರವಿನಾರಾಯಣ ಆಚಾರ್ಯ, ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆಯುವ ಸಾಕ್ಷ್ಯಾಧಾರಿತ ಆಯುರ್ವೇದ ಸಂಶೋಧನಾ ವ್ಯವಸ್ಥೆ ನಿರ್ಮಿಸುವುದು ಮಂಡಳಿಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ವೈಜ್ಞಾನಿಕ ಸಂಶೋಧನೆ, ಸಂಸ್ಥೆಗಳ ಬಲವರ್ಧನೆ, ಡಿಜಿಟಲ್ ಪರಿವರ್ತನೆ, ಅಂತರರಾಷ್ಟ್ರೀಯ ಸಹಕಾರ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿ, ಆಯುರ್ವೇದವನ್ನು ವೈಜ್ಞಾನಿಕ ದೃಢೀಕರಣ, ನವೀನತೆ ಮತ್ತು ಗುಣಮಟ್ಟದ ಮೂಲಕ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ CCRAS ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.


