ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ವಾರ್ಷಿಕ ಶ್ರೀ ಅಮರನಾಥ ಯಾತ್ರೆಗೆ ಭಕ್ತಿಭಾವದಿಂದ ಚಾಲನೆ ದೊರೆತಿದ್ದು, ಮೊದಲ ದಿನವೇ 12,168 ಮಂದಿ ಭಕ್ತರು ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಬಾಲ್ತಾಲ್ ಹಾಗೂ ಸಾಂಪ್ರದಾಯಿಕ ನುನ್ವಾನ್–ಪಹಲ್ಗಾಮ್ ಮೂಲ ಶಿಬಿರಗಳಿಂದ ಶುಕ್ರವಾರ ಮುಂಜಾನೆ ಯಾತ್ರೆ ಆರಂಭವಾಯಿತು. ಮಧ್ಯೆ ಮಧ್ಯೆ ಮಳೆಯಾದರೂ ಸಾವಿರಾರು ಭಕ್ತರು, ಮಹಿಳೆಯರು ಹಾಗೂ ಸಾಧು-ಸಂತರೊಂದಿಗೆ ‘ಬಮ್ ಬಮ್ ಭೋಲೆ’ ಘೋಷಣೆಗಳ ನಡುವೆ 3,880 ಮೀಟರ್ ಎತ್ತರದಲ್ಲಿರುವ ಪವಿತ್ರ ಗುಹೆಯತ್ತ ಪಾದಯಾತ್ರೆ ಆರಂಭಿಸಿದರು.
ಪಹಲ್ಗಾಮ್ನ 48 ಕಿ.ಮೀ. ಉದ್ದದ ಸಾಂಪ್ರದಾಯಿಕ ಮಾರ್ಗ ಹಾಗೂ 14 ಕಿ.ಮೀ. ಉದ್ದದ ಬಾಲ್ತಾಲ್ ಮಾರ್ಗಗಳ ಮೂಲಕ ಭಕ್ತರು ಯಾತ್ರೆ ಕೈಗೊಂಡರು. ಎರಡೂ ಮೂಲ ಶಿಬಿರಗಳಿಂದ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಯಾತ್ರೆಗೆ ಅಧಿಕೃತ ಚಾಲನೆ ನೀಡಿದರು.
ಇದೀಗ ಜಮ್ಮು-ಕಾಶ್ಮೀರ ಆಡಳಿತ, ಮುಂಗಡ ನೋಂದಣಿ ಮಾಡಿಕೊಂಡಿರುವ ಭಕ್ತರು ಮಾತ್ರ ತಮ್ಮ ನಿಗದಿತ ದಿನಾಂಕದಂದು ಯಾತ್ರೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಭದ್ರತಾ ಕಾರಣಗಳಿಂದ ಪ್ರತಿದಿನ ಯಾತ್ರಿಕರ ಸಂಖ್ಯೆಗೆ ಮಿತಿ ನಿಗದಿಪಡಿಸಲಾಗಿದೆ ಎಂದು ಆಡಳಿತ ಸ್ಪಷ್ಟಪಡಿಸಿದೆ.
ನೋಂದಾಯಿತ ಪ್ರತಿಯೊಬ್ಬ ಭಕ್ತರಿಗೂ ನಿಗದಿತ ನಿಯಮಾನುಸಾರ ಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿರುವ ಆಡಳಿತ, ಭಕ್ತರು ಶಿಸ್ತು ಪಾಲಿಸಿ ಅಧಿಕಾರಿಗಳ ಸೂಚನೆಗಳನ್ನು ಅನುಸರಿಸುವಂತೆ ಮನವಿ ಮಾಡಿದೆ.
ಯಾತ್ರೆಯ ಎರಡೂ ಮಾರ್ಗಗಳಲ್ಲಿ ಜಮ್ಮು-ಕಾಶ್ಮೀರ ಪೊಲೀಸ್, ಸಿಆರ್ಪಿಎಫ್ ಹಾಗೂ ಇತರ ಭದ್ರತಾ ಪಡೆಗಳ ಬಹುಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ 57 ದಿನಗಳ ಅಮರನಾಥ ಯಾತ್ರೆ ಆಗಸ್ಟ್ 28ರಂದು ಮುಕ್ತಾಯಗೊಳ್ಳಲಿದೆ.


