ಅಮರನಾಥ ಯಾತ್ರೆ ಸನಾತನ ಸಂಸ್ಕೃತಿಯ ಅಚಲ ಭಕ್ತಿಯ ಸಂಕೇತ: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮರನಾಥ ಯಾತ್ರೆಯನ್ನು ಸನಾತನ ಸಂಸ್ಕೃತಿಯ ಮೇಲಿನ ಅಚಲ ಭಕ್ತಿ, ಅಸೀಮ ತಾಳ್ಮೆ, ಸಂಯಮ ಮತ್ತು ಎಂದಿಗೂ ಸೋಲೊಪ್ಪದ ಮನೋಬಲದ ಪವಿತ್ರ ಸಂಕೇತ ಎಂದು ಬಣ್ಣಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಬಾಬಾ ಬರ್ಫಾನಿ ದರ್ಶನಕ್ಕಾಗಿ ಅಮರನಾಥ ಯಾತ್ರೆ ಕೈಗೊಂಡಿರುವ ಎಲ್ಲಾ ಭಕ್ತರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ಯಾತ್ರಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಲು ಕೇಂದ್ರ ಸರ್ಕಾರ ಸಂಪೂರ್ಣ ಯಾತ್ರಾ ಮಾರ್ಗದಲ್ಲಿ ವ್ಯಾಪಕ ವ್ಯವಸ್ಥೆಗಳನ್ನು ಕಲ್ಪಿಸಿದೆ ಎಂದು ಅವರು ಹೇಳಿದರು.
ಬಹುಹಂತದ ಭದ್ರತಾ ವ್ಯವಸ್ಥೆ, ಕ್ಯೂಆರ್ ಕೋಡ್ ಆಧಾರಿತ ನೋಂದಣಿ, ಯಾತ್ರಿಕರಿಗೆ ಉತ್ತಮ ವಸತಿ, ಆರೋಗ್ಯ ಸೇವೆ ಹಾಗೂ ವಿಪತ್ತು ನಿರ್ವಹಣೆಯಂತಹ ಸೌಲಭ್ಯಗಳನ್ನು ಬಲಪಡಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಪ್ರತಿ ಭಕ್ತನ ಯಾತ್ರೆ ಸುರಕ್ಷಿತ, ಸುಗಮ ಮತ್ತು ಸಂತೋಷದಾಯಕವಾಗಿರಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


