ಅಮರನಾಥ ಯಾತ್ರಿಕರಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶುಭಾಶಯ
ಜಮ್ಮು-ಕಾಶ್ಮೀರದಲ್ಲಿ ಆರಂಭವಾಗಿರುವ ವಾರ್ಷಿಕ ಶ್ರೀ ಅಮರನಾಥ ಯಾತ್ರೆ ಕೈಗೊಂಡಿರುವ ಭಕ್ತರಿಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಅಮರನಾಥ ಯಾತ್ರೆ ಭಾರತದ ಅತ್ಯಂತ ಪವಿತ್ರ ಮತ್ತು ಪ್ರಾಚೀನ ತೀರ್ಥಯಾತ್ರೆಗಳಲ್ಲಿ ಒಂದಾಗಿದ್ದು, ದೇಶದ ಶಾಶ್ವತ ಆಧ್ಯಾತ್ಮಿಕ ಪರಂಪರೆ ಹಾಗೂ ಭಕ್ತಿ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಶತಮಾನಗಳಿಂದ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಅಮರನಾಥ ಗುಹೆಗೆ ಭೇಟಿ ನೀಡಿ, ಏಕತೆ, ಸೌಹಾರ್ದತೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಗವಾನ್ ಶಿವನ ಆಶೀರ್ವಾದ ಎಲ್ಲ ಯಾತ್ರಿಕರಿಗೆ ಶಕ್ತಿ, ಶಾಂತಿ ಹಾಗೂ ಆಧ್ಯಾತ್ಮಿಕ ತೃಪ್ತಿಯನ್ನು ನೀಡಲಿ ಎಂದು ಉಪರಾಷ್ಟ್ರಪತಿ ಹಾರೈಸಿದ್ದಾರೆ.
ಯಾತ್ರಿಕರ ಸುರಕ್ಷತೆ ಮತ್ತು ಸುಗಮ ಯಾತ್ರೆಗಾಗಿ ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಆಡಳಿತಾಧಿಕಾರಿಗಳು, ಭದ್ರತಾ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಯಂಸೇವಕರ ಸೇವೆಯನ್ನು ಅವರು ಶ್ಲಾಘಿಸಿದ್ದಾರೆ.
ಎಲ್ಲಾ ಭಕ್ತರಿಗೆ ಸುರಕ್ಷಿತ, ಯಶಸ್ವಿ ಹಾಗೂ ನಿರ್ವಿಘ್ನ ಅಮರನಾಥ ಯಾತ್ರೆ ನೆರವೇರಲಿ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಶುಭಕೋರಿದ್ದಾರೆ.


