ನವದೆಹಲಿ: ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ: ಭಾಗ–1’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಚಿತ್ರದಲ್ಲಿ ಭಗವಾನ್ ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಚರ್ಚೆ ಮತ್ತು ಟೀಕೆಗಳು ಆರಂಭವಾಗಿವೆ.
ಈ ಟೀಕೆಗಳ ನಡುವೆಯೇ, ಇತ್ತೀಚೆಗೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ನಿರ್ದೇಶಕ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ರಾವಣನ ಪಾತ್ರದಲ್ಲಿ ನಟಿಸಿರುವ ಯಶ್ ಅವರೊಂದಿಗೆ ಭಾಗವಹಿಸಿದ್ದ ರಣಬೀರ್ ಕಪೂರ್, ತಮ್ಮ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿದ್ದರು.
ರಣಬೀರ್ ಕಪೂರ್ ಮಾತನಾಡುತ್ತಾ, “ಶ್ರೀರಾಮನ ಪಾತ್ರವನ್ನು ನಿರ್ವಹಿಸಲು ಯಾರೂ ಪರಿಪೂರ್ಣ ನಟರಲ್ಲ. ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದಾಗ ನಾನು ಈ ಜವಾಬ್ದಾರಿಗೆ ಅರ್ಹನೇ ಎಂಬ ಪ್ರಶ್ನೆ ನನಗೂ ಮೂಡಿತ್ತು. ಆದರೆ ನಂತರ ಈ ಕಥೆಯ ಮಹತ್ವ ಮತ್ತು ಅದರ ಹೊಣೆಗಾರಿಕೆ ಅರಿವಾಯಿತು” ಎಂದು ಹೇಳಿದರು.
ಅಲ್ಲದೆ, “ಸುಮಾರು ನಾಲ್ಕು ಸಾವಿರ ವರ್ಷಗಳಿಂದ ಜನರ ಮನಸ್ಸಿನಲ್ಲಿ ಬದುಕಿರುವ ರಾಮಾಯಣದ ಕಥೆಯನ್ನು ತೆರೆಗೆ ತರುವುದು ಅತ್ಯಂತ ದೊಡ್ಡ ಜವಾಬ್ದಾರಿ. ಪ್ರತಿಯೊಬ್ಬ ಭಕ್ತನ ಮನಸ್ಸಿನಲ್ಲಿ ಶ್ರೀರಾಮನ ವಿಭಿನ್ನ ರೂಪವಿದೆ. ಹೀಗಾಗಿ ಕೆಲವರು ನನ್ನ ಆಯ್ಕೆ ಸರಿಯಲ್ಲ ಎಂದು ಹೇಳಬಹುದು, ಇನ್ನು ಕೆಲವರು ಸರಿಯಾಗಿದೆ ಎನ್ನಬಹುದು. ಆದರೆ ಸರಿಯಾದ ಮನೋಭಾವ, ಭಕ್ತಿ ಮತ್ತು ಗೌರವದಿಂದ ಪಾತ್ರವನ್ನು ನಿರ್ವಹಿಸುವ ಯಾವುದೇ ನಟ ಈ ಪಾತ್ರಕ್ಕೆ ನ್ಯಾಯ ಒದಗಿಸಬಹುದು” ಎಂದು ಅಭಿಪ್ರಾಯಪಟ್ಟರು.
ಎರಡು ಪಾತ್ರಗಳಲ್ಲಿ ರಣಬೀರ್
ಈ ಚಿತ್ರದಲ್ಲಿ ರಣಬೀರ್ ಕಪೂರ್ ಭಗವಾನ್ ಶ್ರೀರಾಮ ಹಾಗೂ ಪರಶುರಾಮ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಮಾತನಾಡಿದ ಅವರು, ಎರಡೂ ಪಾತ್ರಗಳ ಆಧ್ಯಾತ್ಮಿಕತೆ, ಭಾವನಾತ್ಮಕ ಅಂಶ, ದೇಹಭಾಷೆ ಮತ್ತು ಧ್ವನಿಯಲ್ಲಿ ಸ್ಪಷ್ಟ ವ್ಯತ್ಯಾಸ ತರುವ ಮೂಲಕ ಅಭಿನಯಕ್ಕೆ ಸಿದ್ಧತೆ ನಡೆಸಿದ್ದಾಗಿ ತಿಳಿಸಿದ್ದಾರೆ.
‘ರಾಮಾಯಣ’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗ 2026ರ ದೀಪಾವಳಿ ಸಂದರ್ಭದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ, ಯಶ್ ರಾವಣನಾಗಿ ಹಾಗೂ ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ಅಭಿನಯಿಸಿದ್ದಾರೆ.


