ಜಮ್ಮು: ವಾರ್ಷಿಕ ಶ್ರೀ ಅಮರನಾಥ ಯಾತ್ರೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ದೇಶದ ವಿವಿಧ ಭಾಗಗಳಿಂದ ಆಗಮಿಸುವ ಯಾತ್ರಿಕರಿಗೆ ಯಾವುದೇ ತೊಂದರೆಯಾಗದಂತೆ ಉತ್ತರ ರೈಲ್ವೆಯ ಜಮ್ಮು ವಿಭಾಗ ಜಮ್ಮು ತಾವಿ ರೈಲು ನಿಲ್ದಾಣದಲ್ಲಿ ವ್ಯಾಪಕ ಸೌಲಭ್ಯಗಳನ್ನು ಕಲ್ಪಿಸಿದೆ.
ಯಾತ್ರಿಕರ ಅನುಕೂಲಕ್ಕಾಗಿ ಸಂಪೂರ್ಣ ಮುಚ್ಚಿದ ಪ್ರಯಾಣಿಕರ ನಿರೀಕ್ಷಣಾ ಕೇಂದ್ರವನ್ನು ನಿರ್ಮಿಸಲಾಗಿದ್ದು, ಆಸನ ವ್ಯವಸ್ಥೆ, ಬೆಳಕು, ಫ್ಯಾನ್, ಕೂಲರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡಲು 24 ಗಂಟೆಗಳ ಹೌಸ್ಕೀಪಿಂಗ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರೈಲುಗಳಿಗೆ ನಿರಂತರ ನೀರು ಪೂರೈಕೆ ಆಗುವಂತೆ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.
ರೈಲು ನಿಲ್ದಾಣದಲ್ಲಿ 24×7 ಸಹಾಯ ಕೇಂದ್ರ ಸ್ಥಾಪಿಸಲಾಗಿದ್ದು, ರೈಲ್ವೆ ಸಿಬ್ಬಂದಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಯಾತ್ರಿಕರಿಗೆ ರೈಲು ವೇಳಾಪಟ್ಟಿ, ಪ್ಲಾಟ್ಫಾರ್ಮ್ ಮಾಹಿತಿ, ವೈದ್ಯಕೀಯ ನೆರವು ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದಾರೆ.
ಭದ್ರತೆ ಹಾಗೂ ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚುವರಿ ಟಿಕೆಟ್ ಪರಿಶೀಲಕರು, ವಾಣಿಜ್ಯ ವಿಭಾಗದ ಸಿಬ್ಬಂದಿ ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿರಂತರ ನಿಗಾ ವಹಿಸಲಾಗುತ್ತಿದ್ದು, ರೈಲ್ವೆ ವಾರ್ ರೂಮ್ನಿಂದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಇದರೊಂದಿಗೆ, 4 ಮತ್ತು 5ನೇ ಪ್ಲಾಟ್ಫಾರ್ಮ್ಗಳನ್ನು ರೈಲು ಸಂಚಾರಕ್ಕೆ ತೆರೆಯಲಾಗಿದ್ದು, 13152ನೇ ರೈಲು ಶುಕ್ರವಾರ ಹೊಸ ಪ್ಲಾಟ್ಫಾರ್ಮ್ನಿಂದ ಸಂಚರಿಸಿದ ಮೊದಲ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೈಲ್ವೆ ಆಡಳಿತವು ಯಾತ್ರಿಕರಿಗೆ ನೋಂದಣಿ ಪೂರ್ಣಗೊಳಿಸಿದ ಬಳಿಕವೇ ಪ್ರಯಾಣಿಸಬೇಕು, ಅಧಿಕೃತ ಕೌಂಟರ್ಗಳಿಂದಲೇ ಟಿಕೆಟ್ ಖರೀದಿಸಬೇಕು, ಅಪರಿಚಿತರಿಂದ ಆಹಾರ ಅಥವಾ ಪಾನೀಯ ಸ್ವೀಕರಿಸಬಾರದು, ಪ್ಲಾಟ್ಫಾರ್ಮ್ಗಳಲ್ಲಿ ಅನಗತ್ಯ ಜನಸಂದಣಿ ಉಂಟುಮಾಡಬಾರದು ಎಂದು ಸಲಹೆ ನೀಡಿದೆ. ಯಾವುದೇ ನೆರವಿಗಾಗಿ ರೈಲ್ ಮದದ್ ಸಹಾಯವಾಣಿ 139 ಅಥವಾ ನಿಲ್ದಾಣದ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.


