ಸಾರಿಸ್ಕಾದಲ್ಲಿ ಹುಲಿ ಪುನರ್ಸ್ಥಾಪನೆಗೆ 18 ವರ್ಷ: 53 ಹುಲಿಗಳೊಂದಿಗೆ ಯಶೋಗಾಥೆ, ದೇಶಕ್ಕೆ ಭೂಪೇಂದ್ರ ಯಾದವ್ ಅಭಿನಂದನೆ
ಸಾರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಹುಲಿಗಳ ಪುನರ್ಸ್ಥಾಪನೆ (Tiger Reintroduction) ಯೋಜನೆ ಯಶಸ್ವಿಯಾಗಿ 18 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ದೇಶದ ಜನತೆಗೆ ಹಾಗೂ ಪ್ರಕೃತಿ ಪ್ರಿಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಒಂದು ಕಾಲದಲ್ಲಿ ಸಂಪೂರ್ಣವಾಗಿ ಹುಲಿಗಳ ಅಸ್ತಿತ್ವ ಕಳೆದುಕೊಂಡಿದ್ದ ಸಾರಿಸ್ಕಾ ಇಂದು 53 ಹುಲಿಗಳಿಗೆ ಆಶ್ರಯವಾಗಿರುವುದು ಪ್ರಕೃತಿಯ ಪುನರುಜ್ಜೀವನ, ವೈಜ್ಞಾನಿಕ ಸಂರಕ್ಷಣೆ ಹಾಗೂ ಸಮೂಹದ ಸಂಕಲ್ಪದ ಜೀವಂತ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.
ಸಾರಿಸ್ಕಾದಲ್ಲಿ ಹುಲಿ ಪುನರ್ಸ್ಥಾಪನೆ ಯೋಜನೆ ಭಾರತಕ್ಕಷ್ಟೇ ಅಲ್ಲ, ವಿಶ್ವದ ವನ್ಯಜೀವಿ ಸಂರಕ್ಷಣೆ ಮತ್ತು ಜೀವಿಗಳ ಪುನರುತ್ಥಾನದ ಕ್ಷೇತ್ರದಲ್ಲಿಯೂ ಐತಿಹಾಸಿಕ ಸಾಧನೆಯಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ವನ್ಯಜೀವಿ ಸಂರಕ್ಷಣೆಯನ್ನು ಅಭಿವೃದ್ಧಿಯ ಮುಖ್ಯವಾಹಿನಿಯೊಂದಿಗೆ ಸಂಯೋಜಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತುತ ವಿಶ್ವದ ಒಟ್ಟು ಕಾಡು ಹುಲಿಗಳಲ್ಲಿ ಸುಮಾರು 75 ಶೇಕಡಾ ಹುಲಿಗಳು ಭಾರತದಲ್ಲಿವೆ ಎಂದು ಉಲ್ಲೇಖಿಸಿದ ಅವರು, ಇದು ದೇಶದ ಪರಿಣಾಮಕಾರಿ ಸಂರಕ್ಷಣಾ ನೀತಿಗಳು, ಸಾರ್ವಜನಿಕರ ಸಹಭಾಗಿತ್ವ ಹಾಗೂ ಪ್ರಕೃತಿ ಸಂರಕ್ಷಣೆಯ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.
ಭವಿಷ್ಯದ ಪೀಳಿಗೆಗಳಿಗೆ ಸಾರಿಸ್ಕಾದ ಯಶೋಗಾಥೆ ಸ್ಪೂರ್ತಿಯಾಗುವಂತೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಭೂಪೇಂದ್ರ ಯಾದವ್ ಕರೆ ನೀಡಿದ್ದಾರೆ.


