ಪಶ್ಚಿಮ ಬಂಗಾಳದಲ್ಲಿ ಮುಂಗಾರು ಚುರುಕುಗೊಂಡಿದ್ದು, ಹಿಮಾಲಯ ಪಾದಭಾಗದ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಬಂಗಾಳ ಕೊಲ್ಲಿಯಿಂದ ಹೆಚ್ಚಿನ ಪ್ರಮಾಣದ ತೇವಾಂಶ ಪ್ರವೇಶಿಸುತ್ತಿರುವುದು ಹಾಗೂ ಋತುಮಾನದ ತಗ್ಗು ಒತ್ತಡದ ರೇಖೆ ಸಕ್ರಿಯವಾಗಿರುವ ಹಿನ್ನೆಲೆ, ಉತ್ತರ ಬಂಗಾಳದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ ಎಂದು ಇಲಾಖೆ ತಿಳಿಸಿದೆ.
ಕೊಲ್ಕತ್ತಾ, ಹಾವ್ರಾ, ಹೂಗ್ಲಿ, ಪೂರ್ವ ಬರ್ಧಮಾನ, ಪೂರ್ವ ಮತ್ತು ಪಶ್ಚಿಮ ಮೇದಿನಿಪುರ ಜಿಲ್ಲೆಗಳಲ್ಲಿಯೂ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಲಾಗಿದೆ.
ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಕೊಲ್ಕತ್ತಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಚೇರಿ ಸಮಯದಲ್ಲಿ ವಾಹನ ಸಂಚಾರವೂ ಹಲವು ಕಡೆ ನಿಧಾನಗೊಂಡಿತ್ತು.
ಇದೇ ವೇಳೆ, ದಾರ್ಜಿಲಿಂಗ್ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭೂಕುಸಿತ ಪ್ರಕರಣಗಳು ವರದಿಯಾಗಿವೆ. ಭಾರೀ ಮಳೆಯ ಪರಿಣಾಮ ಸಿಲಿಗುರಿ ಮತ್ತು ಮಿರಿಕ್ ಸಂಪರ್ಕಿಸುವ ದುಧಿಯಾ ಪ್ರದೇಶದ ತಾತ್ಕಾಲಿಕ ಕಬ್ಬಿಣದ ಸೇತುವೆ ಕುಸಿದಿದ್ದು, ಸ್ಥಳೀಯರ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮುಂದಿನ ಕೆಲವು ದಿನಗಳ ಕಾಲ ಉತ್ತರ ಮತ್ತು ದಕ್ಷಿಣ ಬಂಗಾಳದ ಹಲವು ಭಾಗಗಳಲ್ಲಿ ಮಳೆಯ ತೀವ್ರತೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಆಡಳಿತ ಹಾಗೂ ಹವಾಮಾನ ಇಲಾಖೆ ಸಲಹೆ ನೀಡಿವೆ.


