ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಬೆಲೆ ಸ್ಥಿರತೆ ಮತ್ತು ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಕ್ಕರೆ ವ್ಯಾಪಾರಿಗಳ ದಾಸ್ತಾನು ಮಿತಿಯನ್ನು 4,000 ಕ್ವಿಂಟಾಲ್ನಿಂದ 2,000 ಕ್ವಿಂಟಾಲ್ಗೆ ಇಳಿಸಿದೆ.
ಹೊಸ ಮಿತಿ ಈ ತಿಂಗಳ 15ರಿಂದ ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಸಕ್ಕರೆಯನ್ನು ಅತಿಯಾಗಿ ಸಂಗ್ರಹಿಸಿ ಕೃತಕ ಕೊರತೆ ಸೃಷ್ಟಿಸುವುದು ಹಾಗೂ ಊಹಾಪೋಹದ ವಹಿವಾಟು ನಡೆಸುವುದನ್ನು ತಡೆಯುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ. ಇದರೊಂದಿಗೆ ಗ್ರಾಹಕರ ಹಿತಾಸಕ್ತಿ ಕಾಪಾಡಿ, ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸರ್ಕಾರ ಮುಂದಾಗಿದೆ.
30 ದಿನಕ್ಕಿಂತ ಹೆಚ್ಚು ದಾಸ್ತಾನು ಇರಿಸುವಂತಿಲ್ಲ
ಪ್ರಸ್ತುತ ದೇಶಾದ್ಯಂತ ಸಕ್ಕರೆ ವ್ಯಾಪಾರಿಗಳಿಗೆ 4,000 ಕ್ವಿಂಟಾಲ್ಗಳ ದಾಸ್ತಾನು ಮಿತಿ ಜಾರಿಯಲ್ಲಿತ್ತು. ಇದೀಗ ಪರಿಷ್ಕೃತ ನಿಯಮಗಳ ಪ್ರಕಾರ, ವ್ಯಾಪಾರಿಗಳು ಸಕ್ಕರೆ ಸ್ವೀಕರಿಸಿದ ದಿನದಿಂದ 30 ದಿನಗಳಿಗಿಂತ ಹೆಚ್ಚು ಅವಧಿಗೆ ಅದನ್ನು ದಾಸ್ತಾನಿನಲ್ಲಿ ಇಟ್ಟುಕೊಳ್ಳುವಂತಿಲ್ಲ.
ಅಲ್ಲದೆ, ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಮಯದಲ್ಲೂ ಒಬ್ಬ ವ್ಯಾಪಾರಿ 2,000 ಕ್ವಿಂಟಾಲ್ಗಿಂತ ಹೆಚ್ಚಿನ ಸಕ್ಕರೆ ದಾಸ್ತಾನು ಹೊಂದುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಕೋಲ್ಕತ್ತಾಗೆ ಮಾತ್ರ 4,000 ಕ್ವಿಂಟಾಲ್ ಮಿತಿ
ಆದರೆ ಕೋಲ್ಕತ್ತಾ ಹಾಗೂ ಅದರ ವಿಸ್ತೃತ ಮಹಾನಗರ ಪ್ರದೇಶಗಳಿಗೆ ಮಾತ್ರ 4,000 ಕ್ವಿಂಟಾಲ್ಗಳ ಹಳೆಯ ಮಿತಿಯನ್ನು ಮುಂದುವರಿಸಲಾಗಿದೆ.
ಕೋಲ್ಕತ್ತಾ ಪ್ರದೇಶವು ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ಸಕ್ಕರೆಯನ್ನು ಪಡೆದು, ಈಶಾನ್ಯ ರಾಜ್ಯಗಳು ಸೇರಿದಂತೆ ದೇಶದ ಪೂರ್ವ ಭಾಗಗಳಿಗೆ ಪೂರೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ವಿಶೇಷ ಮಾರುಕಟ್ಟೆ ಅಗತ್ಯಗಳನ್ನು ಪರಿಗಣಿಸಿ ಈ ವಿನಾಯಿತಿ ನೀಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ತಿಳಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಸಮರ್ಪಕ ಲಭ್ಯತೆ, ಸುಗಮ ಪೂರೈಕೆ ಮತ್ತು ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇದೇ ವೇಳೆ, ನೈಜ ವ್ಯಾಪಾರ ಮತ್ತು ವಿತರಣಾ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ.


