ಟೊರಾಂಟೊ, ಆಗಸ್ಟ್ 28: ಭಾರತದ ಆರ್ಥಿಕತೆಯಲ್ಲಿ ನಡೆಯುತ್ತಿರುವ ಸುಧಾರಣೆಗಳು ಹಾಗೂ ನಿರಂತರ ಬೆಳವಣಿಗೆಯ ವೇಗವು ಭಾರತ–ಕೆನಡಾ ನಡುವಿನ ಹೂಡಿಕೆ ಆಧಾರಿತ ಆರ್ಥಿಕ ಸಹಭಾಗಿತ್ವಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತವು ಜಾಗತಿಕ ಮಟ್ಟದಲ್ಲಿ ಉತ್ಪಾದನೆ, ನಾವೀನ್ಯತೆ ಮತ್ತು ರಫ್ತಿಗೆ ಪ್ರಮುಖ ವೇದಿಕೆಯಾಗಿ ವೇಗವಾಗಿ ಹೊರಹೊಮ್ಮುತ್ತಿದೆ. ಈ ಹಿನ್ನೆಲೆಯಲ್ಲಿ ಕೆನಡಾದ ಹೂಡಿಕೆದಾರರು ಭಾರತದ ವಿಸ್ತರಿಸುತ್ತಿರುವ ಸಾಮರ್ಥ್ಯವನ್ನು ಬಳಸಿಕೊಂಡು ದೇಶೀಯ ಮಾತ್ರವಲ್ಲದೆ ಜಾಗತಿಕ ಮಾರುಕಟ್ಟೆಗಳಿಗೂ ಸೇವೆ ಒದಗಿಸುವ ಅವಕಾಶಗಳನ್ನು ಅನ್ವೇಷಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಟೊರಾಂಟೊದಲ್ಲಿ ನಡೆದ ಉನ್ನತ ಮಟ್ಟದ ಬಿಸಿನೆಸ್ ರೌಂಡ್ಟೇಬಲ್ ಸಭೆಯಲ್ಲಿ ಮಾತನಾಡಿದ ಸೀತಾರಾಮನ್, ಭಾರತದಲ್ಲಿ ಜಾರಿಗೊಳ್ಳುತ್ತಿರುವ ಆರ್ಥಿಕ ಸುಧಾರಣೆಗಳು, ಡಿಜಿಟಲೀಕರಣ, ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚುತ್ತಿರುವ ಹೂಡಿಕೆ ಹಾಗೂ ಗುರಿಪಡಿಸಿದ ನೀತಿ ಬೆಂಬಲವು ದೀರ್ಘಾವಧಿಯ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಬಲಪಡಿಸುತ್ತಿದೆ ಎಂದು ವಿವರಿಸಿದರು.
ಭಾರತವನ್ನು ಕೇವಲ ಹೂಡಿಕೆ ತಾಣವಾಗಿ ನೋಡದೆ, ಜಾಗತಿಕ ಬೆಳವಣಿಗೆಗೆ ಕಾರ್ಯತಂತ್ರದ ಪಾಲುದಾರ ಹಾಗೂ ವೇದಿಕೆಯಾಗಿ ಪರಿಗಣಿಸುವಂತೆ ಅವರು ಕೆನಡಾದ ಕಂಪನಿಗಳು ಮತ್ತು ಹೂಡಿಕೆದಾರರಿಗೆ ಮನವಿ ಮಾಡಿದರು. ಭಾರತೀಯ ಮಾರುಕಟ್ಟೆಯ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಸೇವೆ ಸಲ್ಲಿಸುವಂತಹ ದೀರ್ಘಾವಧಿಯ ವ್ಯವಹಾರ, ಹೂಡಿಕೆ ಮತ್ತು ಪಾಲುದಾರಿಕೆಗಳನ್ನು ರೂಪಿಸಬೇಕು ಎಂದು ಅವರು ಸಲಹೆ ನೀಡಿದರು.
ಹಣಕಾಸು ಸೇವೆಗಳಲ್ಲಿ ಕೆನಡಾ ಕಂಪನಿಗಳಿಗೆ ಅವಕಾಶ
ಕೆನಡಾದ ಕಂಪನಿಗಳಿಗೆ ಭಾರತದ ಹಣಕಾಸು ಸೇವಾ ಕ್ಷೇತ್ರದಲ್ಲಿ ಅಪಾರ ಅವಕಾಶಗಳಿವೆ ಎಂದು ಸೀತಾರಾಮನ್ ತಿಳಿಸಿದರು. ವಿಶೇಷವಾಗಿ ಗುಜರಾತ್ನ ಗಿಫ್ಟ್ ಸಿಟಿ (GIFT City) ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (GIFT IFSC) ಮೂಲಕ ಅಂತಾರಾಷ್ಟ್ರೀಯ ಹಣಕಾಸು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕೆನಡಾ ಸಂಸ್ಥೆಗಳಿಗೆ ಹೆಚ್ಚಿನ ಅವಕಾಶವಿದೆ ಎಂದು ಅವರು ಹೇಳಿದರು.
2030ರ ವೇಳೆಗೆ ಭಾರತ–ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ವಾರ್ಷಿಕ 70 ಶತಕೋಟಿ ಡಾಲರ್ಗೆ ಹೆಚ್ಚಿಸುವ ಗುರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಉಭಯ ದೇಶಗಳ ಆರ್ಥಿಕ ಸಹಭಾಗಿತ್ವವು ಕೇವಲ ವ್ಯಾಪಾರಕ್ಕೆ ಸೀಮಿತವಾಗಿರಬಾರದು ಎಂದು ಹಣಕಾಸು ಸಚಿವೆ ಒತ್ತಿ ಹೇಳಿದರು.
ಹೂಡಿಕೆ, ತಂತ್ರಜ್ಞಾನ, ನಾವೀನ್ಯತೆ, ಹಣಕಾಸು ಸೇವೆಗಳು ಹಾಗೂ ದೀರ್ಘಾವಧಿಯ ಜಾಗತಿಕ ವ್ಯವಹಾರಿಕ ಪಾಲುದಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ–ಕೆನಡಾ ಆರ್ಥಿಕ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ದೊಡ್ಡ ಅವಕಾಶವಿದೆ ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟರು.


