ವಿಶ್ವಸಂಸ್ಥೆ (UN) ವೇದಿಕೆಯಲ್ಲಿ ಭಾರತವು ಮತ್ತೊಮ್ಮೆ ಪಾಕಿಸ್ತಾನದ ಗಡಿ ದಾಟಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ತೀವ್ರವಾಗಿ ಖಂಡಿಸಿದ್ದು, ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಹಾಗೂ ಅವಿನಾಭಾವ ಅಂಗವಾಗಿದ್ದು, ಎಂದೆಂದಿಗೂ ಹಾಗೆಯೇ ಉಳಿಯಲಿದೆ ಎಂದು ಸ್ಪಷ್ಟಪಡಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ನಡೆದ ನೈಸರ್ಗಿಕ ಸಂಪನ್ಮೂಲಗಳ ಆಡಳಿತ (Natural Resources Governance) ಕುರಿತ ಉನ್ನತ ಮಟ್ಟದ ಮುಕ್ತ ಚರ್ಚೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪಿ. ಹರೀಶ್ ಈ ಹೇಳಿಕೆ ನೀಡಿದ್ದಾರೆ.
ಉನ್ನತ ಮಟ್ಟದ ಚರ್ಚೆಯನ್ನು ಪಾಕಿಸ್ತಾನ ತನ್ನ ಸುಳ್ಳು ಪ್ರಚಾರಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಜಮ್ಮು ಮತ್ತು ಕಾಶ್ಮೀರವು ಹಿಂದೆ, ಈಗ ಹಾಗೂ ಮುಂದೆಯೂ ಭಾರತದ ಅವಿಭಾಜ್ಯ ಭಾಗವೇ ಆಗಿರಲಿದೆ. ಇದು ಭಾರತದ ಸಂವಿಧಾನ ಹಾಗೂ ಕಾನೂನಿನ ಪ್ರಕಾರ ಸ್ಥಾಪಿತವಾದ ಸತ್ಯ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಉಳಿದಿರುವ ಏಕೈಕ ಸಮಸ್ಯೆಯೆಂದರೆ, ಭಾರತದ ಸಾರ್ವಭೌಮ ಪ್ರದೇಶವನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವುದೇ ಎಂದು ಅವರು ಒತ್ತಿ ಹೇಳಿದರು.
ಸಿಂಧೂ ಜಲ ಒಪ್ಪಂದ (Indus Water Treaty) ಕುರಿತು ಮಾತನಾಡಿದ ಪಿ. ಹರೀಶ್, ಈ ವಿಷಯದಲ್ಲಿ ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದೆ ಎಂದು ತಿಳಿಸಿದರು.
“ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯ ಆಧಾರದ ಮೇಲೆ ಸಹಕಾರ ನಿರೀಕ್ಷಿಸಲಾಗುವುದಿಲ್ಲ, ಒಂದು ದೇಶ ಗಡಿ ದಾಟಿ ಭಯೋತ್ಪಾದನೆಯನ್ನು ತನ್ನ ರಾಜ್ಯ ನೀತಿಯ ಸಾಧನವಾಗಿ ಬಳಸುತ್ತಿರುವಾಗ” ಎಂದು ಅವರು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು.
ಮಾತಿನ ಕೊನೆಯಲ್ಲಿ, ಇತರರ ಬಗ್ಗೆ ಟೀಕೆ ಮಾಡುವುದಕ್ಕಿಂತ ಮೊದಲು ಪಾಕಿಸ್ತಾನ ತನ್ನ ಆಂತರಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿ ಎಂದು ಪಿ. ಹರೀಶ್ ಕಟುವಾಗಿ ಪ್ರತಿಕ್ರಿಯಿಸಿದರು.


