ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿವೀರ ಚಂದ್ರಶೇಖರ್ ಆಜಾದ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಚಂದ್ರಶೇಖರ್ ಆಜಾದ್ ಅವರ ನಿರ್ಭೀತ ಧೈರ್ಯ ಹಾಗೂ ಅಚಲ ದೇಶಭಕ್ತಿ ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಹೆಮ್ಮೆಯ ಸ್ಥಾನ ಪಡೆದಿದೆ” ಎಂದು ಹೇಳಿದ್ದಾರೆ.
ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವಂತೆ ಅವರು ಅಸಂಖ್ಯಾತ ಯುವಕರಿಗೆ ಪ್ರೇರಣೆ ನೀಡಿದರು ಎಂದು ಪ್ರಧಾನಿ ಹೇಳಿದ್ದಾರೆ. ಅವರ ದೃಢ ಸಂಕಲ್ಪ ಮತ್ತು ತ್ಯಾಗದ ಮನೋಭಾವ ಇಂದಿಗೂ ಪೀಳಿಗೆಗಳಿಗೆ ಸ್ಫೂರ್ತಿಯಾಗುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಚಂದ್ರಶೇಖರ್ ಆಜಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
“ಚಂದ್ರಶೇಖರ್ ಆಜಾದ್ ಅವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಜೀವಮಾನವಿಡೀ ಹೋರಾಡುವುದಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯನ ಮನದಲ್ಲಿ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಲು ಶ್ರಮಿಸಿದರು” ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಅವರು ತಮ್ಮ ಅದಮ್ಯ ಧೈರ್ಯ, ಅಚಲ ಸಂಕಲ್ಪ ಹಾಗೂ ಪರಮ ತ್ಯಾಗದ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿದರು ಎಂದು ಶ್ಲಾಘಿಸಿದ ಸಚಿವರು, ಮಾತೃಭೂಮಿಯ ಮೇಲಿನ ಭಕ್ತಿಯ ಜ್ವಾಲೆಯನ್ನು ಲಕ್ಷಾಂತರ ಯುವಕರ ಹೃದಯದಲ್ಲಿ ಪ್ರಜ್ವಲಿಸಿದರು ಎಂದು ತಿಳಿಸಿದ್ದಾರೆ.
ಕೊನೆಯ ಉಸಿರಿನವರೆಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಚಂದ್ರಶೇಖರ್ ಆಜಾದ್, ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯ ಅಮರ ಮಾದರಿಯಾಗಿದ್ದು, ಅವರ ಜೀವನ ದೇಶದ ಜನತೆಗೆ ಸದಾ ಸ್ಫೂರ್ತಿದಾಯಕವಾಗಿರಲಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.


