ಭಾರತ–ಭೂತಾನ್ ಬಾಂಧವ್ಯ ಮತ್ತಷ್ಟು ಬಲ: ರಾಜ ವಾಂಗ್ಚುಕ್ ಜೊತೆ ವಿಕ್ರಂ ಮಿಸ್ರಿ ಮಾತುಕತೆ

1 Min Read
1 Min Read

ಥಿಂಫು: ಭಾರತ ಮತ್ತು ಭೂತಾನ್ ನಡುವಿನ ಐದನೇ ಅಭಿವೃದ್ಧಿ ಸಹಕಾರ ಮಾತುಕತೆ (Development Cooperation Talks) ಭೂತಾನ್‌ನ ರಾಜಧಾನಿ ಥಿಂಫುದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹಾಗೂ ಭೂತಾನ್‌ನ ವಿದೇಶಾಂಗ ಕಾರ್ಯದರ್ಶಿ ದಾಶೋ ಪೆಮಾ ಲೆಕ್ಟುಪ್ ಡೋರ್ಜೀ ಜಂಟಿಯಾಗಿ ವಹಿಸಿದ್ದರು.

ಸಭೆಯಲ್ಲಿ ಭೂತಾನ್‌ನ 13ನೇ ಪಂಚವಾರ್ಷಿಕ ಯೋಜನೆಯಡಿ ಭಾರತ ಸಹಕಾರದೊಂದಿಗೆ ಅನುಷ್ಠಾನಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು.

ಥಿಂಫುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿರುವ ಮಾಹಿತಿ ಪ್ರಕಾರ, ವಿವಿಧ ಕ್ಷೇತ್ರಗಳಲ್ಲಿ ಭಾರತ ಬೆಂಬಲದೊಂದಿಗೆ ಜಾರಿಯಾಗುತ್ತಿರುವ ಯೋಜನೆಗಳ ನೆಲಮಟ್ಟದ ಅನುಷ್ಠಾನ ಹಾಗೂ ಪ್ರಗತಿಯನ್ನು ಸಭೆಯಲ್ಲಿ ಮೌಲ್ಯಮಾಪನ ಮಾಡಲಾಯಿತು. ಈ ಮೂಲಕ ಎರಡೂ ರಾಷ್ಟ್ರಗಳ ನಡುವಿನ ಕಾರ್ಯತಂತ್ರದ ಅಭಿವೃದ್ಧಿ ಸಹಭಾಗಿತ್ವದ ವ್ಯಾಪ್ತಿಯೂ ಮತ್ತಷ್ಟು ಸ್ಪಷ್ಟವಾಗಿದೆ.

ಈ ಸಂದರ್ಭದಲ್ಲಿ ಭೂತಾನ್ ಸರ್ಕಾರವು ತನ್ನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಭಾರತ ನೀಡುತ್ತಿರುವ ನಿರಂತರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿತು. ಅಲ್ಲದೆ, ದೇಶದ ಅಭಿವೃದ್ಧಿ ಗುರಿಗಳನ್ನು ಸಾಧಿಸುವಲ್ಲಿ ಭಾರತದ ಕೊಡುಗೆ ಮಹತ್ವದ್ದಾಗಿದೆ ಎಂದು ಶ್ಲಾಘಿಸಿತು.

ಭಾರತ ಮತ್ತು ಭೂತಾನ್ 1968ರಲ್ಲಿ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ್ದು, ಅಂದಿನಿಂದ ಉಭಯ ದೇಶಗಳು ಅಭಿವೃದ್ಧಿ, ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ನಿಕಟ ಸಹಕಾರವನ್ನು ಮುಂದುವರಿಸಿಕೊಂಡಿವೆ.

Share This Article