ಗುವಾಹಟಿ: ಅಸ್ಸಾಂನಲ್ಲಿ ನಿರಂತರ ಮಳೆಯ ಪರಿಣಾಮ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ರಾಜ್ಯದ ಆರು ಜಿಲ್ಲೆಗಳ 9,500ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ ಕಾಮರೂಪ್ ಹಾಗೂ ಕಾಮರೂಪ್ ಮೆಟ್ರೋಪಾಲಿಟನ್ ಜಿಲ್ಲೆಗಳಲ್ಲಿ ನಗರ ಪ್ರವಾಹ (Urban Flooding) ಉಂಟಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ನೀಡಿರುವ ಮಾಹಿತಿಯ ಪ್ರಕಾರ, ಶಿವಸಾಗರ್, ಲಖಿಂಪುರ್, ದರಾಂಗ್, ಸೋನಿತ್ಪುರ್, ಧೇಮಾಜಿ ಹಾಗೂ ಜೋರ್ಹಾಟ್ ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿವೆ.
ಪ್ರವಾಹದಿಂದ 10 ಕಂದಾಯ ವಲಯಗಳು (Revenue Circles) ಹಾಗೂ 61 ಗ್ರಾಮಗಳು ಜಲಾವೃತಗೊಂಡಿದ್ದು, 9,500ಕ್ಕೂ ಹೆಚ್ಚು ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದುವರೆಗೆ ಯಾವುದೇ ಜೀವಹಾನಿ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ, ಕಾಮರೂಪ್ ಮತ್ತು ಕಾಮರೂಪ್ ಮೆಟ್ರೋಪಾಲಿಟನ್ ಜಿಲ್ಲೆಗಳಲ್ಲಿ ನಗರ ಪ್ರವಾಹ ಉಂಟಾಗಿದ್ದು, ಗುವಾಹಟಿ ನಗರದ ಹಲವು ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಅದೇ ರೀತಿ ಶಿವಸಾಗರ್ ಪಟ್ಟಣದ ಪೋಟಿಯಾಹೋಲಿ, ಭೋಟಿಯಾಪಾರ್, ಪಚಿಪಥರ್, ದುಲಿಯಾಜಾನ್ ಮೈದ್ ಹಾಗೂ ದೇವಲಾಖಾಟ್ ಸೇರಿದಂತೆ ಹಲವು ಪ್ರದೇಶಗಳಲ್ಲೂ ಜಲಾವೃತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸಲು ಸ್ಥಳೀಯ ಆಡಳಿತವು ಚರಂಡಿಗಳ ಸ್ವಚ್ಛತೆ ಮತ್ತು ನೀರು ಹೊರಹಾಕುವ ಕಾರ್ಯವನ್ನು ವೇಗವಾಗಿ ಕೈಗೊಂಡಿದೆ.


