ಮರುಭೂಮೀಕರಣ ಮತ್ತು ಬರದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಮರುಭೂಮೀಕರಣ ಮತ್ತು ಬರ ನಿರೋಧಕ ದಿನವನ್ನು ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಭೂಮಿಯ ಫಲವತ್ತತೆಯ ಕುಸಿತ, ಹವಾಮಾನ ಬದಲಾವಣೆ ಹಾಗೂ ನೀರಿನ ಕೊರತೆಯಂತಹ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರದ ಅಗತ್ಯತೆಯನ್ನು ಈ ದಿನ ನೆನಪಿಸುತ್ತದೆ. ಮರುಭೂಮೀಕರಣವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದ್ದು, ಸರ್ಕಾರಗಳು, ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂಬ ಸಂದೇಶವನ್ನು ಈ ದಿನ ಸಾರುತ್ತದೆ.
ಈ ವರ್ಷದ ವಿಷಯ “Rangelands: Recognise. Respect. Restore” (ಮೇವುಗಾವಲುಗಳನ್ನು ಗುರುತಿಸಿ, ಗೌರವಿಸಿ ಮತ್ತು ಪುನರುಜ್ಜೀವನಗೊಳಿಸಿ) ಎಂಬುದಾಗಿದೆ. ಈ ಘೋಷವಾಕ್ಯವು ಮೇವುಗಾವಲುಗಳ ಆರ್ಥಿಕ, ಪರಿಸರ ಮತ್ತು ಸಾಂಸ್ಕೃತಿಕ ಮಹತ್ವವನ್ನು ಗುರುತಿಸುವುದು, ಅವುಗಳನ್ನು ಸಂರಕ್ಷಿಸುತ್ತಿರುವ ಸಮುದಾಯಗಳಿಗೆ ಗೌರವ ನೀಡುವುದು ಹಾಗೂ ಹಾನಿಗೊಳಗಾದ ಮೇವುಗಾವಲು ಪ್ರದೇಶಗಳ ಪುನಶ್ಚೇತನಕ್ಕೆ ಹೆಚ್ಚಿನ ಹೂಡಿಕೆ ಮಾಡುವ ಅಗತ್ಯವನ್ನು ಒತ್ತಿಹೇಳುತ್ತದೆ.
ಭೂಮಿಯ ಒಟ್ಟು ಭೂಪ್ರದೇಶದ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಆವರಿಸಿರುವ ಮೇವುಗಾವಲುಗಳು ಆಹಾರ ಭದ್ರತೆ, ಜಲಚಕ್ರ ನಿರ್ವಹಣೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಹವಾಮಾನ ಸ್ಥಿರತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆದರೆ ಇವು ವಿಶ್ವದ ಅತ್ಯಂತ ಪ್ರಮುಖವಾಗಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ


