ನವದೆಹಲಿ/ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಮತ್ತೊಂದು ಹಿನ್ನಡೆಯಾಗಿದೆ. ಜಾಮೀನು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಹಿಂದಿನ ಆದೇಶದಲ್ಲಿ ತಿದ್ದುಪಡಿ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಕಚೇರಿ ಸ್ವೀಕರಿಸಲು ನಿರಾಕರಿಸಿದೆ.
ರಿಜಿಸ್ಟ್ರಾರ್ ಕಚೇರಿ, ಈ ಅರ್ಜಿ ಕಾನೂನುಬದ್ಧವಾಗಿ ಪರಿಗಣಿಸಲು ಯೋಗ್ಯವಲ್ಲ (Not Maintainable) ಎಂದು ಅಭಿಪ್ರಾಯಪಟ್ಟಿರುವುದರಿಂದ, ಪ್ರಕರಣ ನ್ಯಾಯಮೂರ್ತಿಗಳ ಪೀಠದ ಮುಂದೆ ವಿಚಾರಣೆಗೆ ಬಂದಿಲ್ಲ.
ಸುಪ್ರೀಂ ಕೋರ್ಟ್ನ ಹಿಂದಿನ ಆದೇಶದಂತೆ, ದರ್ಶನ್ ಅವರು ಒಂದು ವರ್ಷದವರೆಗೆ ಹೊಸ ಜಾಮೀನು ಅರ್ಜಿ ಸಲ್ಲಿಸದಂತೆ ನಿರ್ಬಂಧ ವಿಧಿಸಲಾಗಿತ್ತು. ಈ ಆದೇಶದಲ್ಲಿ ತಿದ್ದುಪಡಿ ಮಾಡುವಂತೆ ಮನವಿ ಸಲ್ಲಿಸಿದ್ದ ದರ್ಶನ್, ತಕ್ಷಣ ಜಾಮೀನು ನೀಡುವಂತೆ ಕೋರಿರಲಿಲ್ಲ. ಬದಲಾಗಿ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮಾನವೀಯ ಕಾರಣಗಳಂತಹ ವಿಶೇಷ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯದ ಮೊರೆ ಹೋಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿಯಲ್ಲಿ, ವಿಚಾರಣೆ ವಿಳಂಬವಾದರೆ ತಮ್ಮ ಕಾನೂನು ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂದು ಉಲ್ಲೇಖಿಸಲಾಗಿತ್ತು. ತಾಯಿಯ ಆರೋಗ್ಯ ಹದಗೆಟ್ಟಿರುವುದನ್ನೂ ಉಲ್ಲೇಖಿಸಿ, ದೀರ್ಘಕಾಲ ಜೈಲಿನಲ್ಲಿರುವುದರಿಂದ ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಶೀಘ್ರ ವಿಚಾರಣೆಯ ಹಕ್ಕು ಸಂವಿಧಾನದ 21ನೇ ವಿಧಿಯಡಿ ಹಾನಿಗೊಳಗಾಗುತ್ತಿದೆ ಎಂದು ವಾದಿಸಲಾಗಿತ್ತು.
ಅಲ್ಲದೆ, ಬಂಧನದಿಂದ ತಮ್ಮ ವೃತ್ತಿಜೀವನ, ಜೀವನೋಪಾಯ ಹಾಗೂ ಕುಟುಂಬದ ಜವಾಬ್ದಾರಿಗಳ ಮೇಲೂ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಆದರೆ, ಈ ಮನವಿಯನ್ನು ರಿಜಿಸ್ಟ್ರಾರ್ ಕಚೇರಿಯೇ ತಿರಸ್ಕರಿಸಿದ್ದರಿಂದ, ಅದು ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಲಿಲ್ಲ. ಹೀಗಾಗಿ, ಹೊಸ ಜಾಮೀನು ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ನ ಹಿಂದಿನ ಆದೇಶ ಸದ್ಯಕ್ಕೆ ಯಥಾಸ್ಥಿತಿಯಲ್ಲೇ ಮುಂದುವರಿದಿದೆ.
ಈ ಬೆಳವಣಿಗೆಯ ಬಳಿಕ, ರಿಜಿಸ್ಟ್ರಾರ್ ಆದೇಶವನ್ನು ಪ್ರಶ್ನಿಸುವುದು ಅಥವಾ ಬೇರೆ ಕಾನೂನು ಮಾರ್ಗಗಳ ಮೂಲಕ ಪರಿಹಾರ ಕೋರುವುದು ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ದರ್ಶನ್ ಅವರ ಕಾನೂನು ತಂಡ ಚಿಂತನೆ ನಡೆಸುವ ಸಾಧ್ಯತೆ ಇದೆ.


