ಬೆಂಗಳೂರು: ‘ಲಂಬೋದರ 2.0’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಕಾಲಿಡುತ್ತಿರುವ ನಟ, ನಿರ್ಮಾಪಕ ಹಾಗೂ ರಾಜಕಾರಣಿ ಅನಿಲ್ ಶೆಟ್ಟಿ, ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿ ಹಿಡಿದಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞೆ ಡಾ. ಗೀತಾ ಗೋಪಿನಾಥ್ ಅವರನ್ನು ಅಭಿನಂದಿಸಿದ್ದಾರೆ.
ಲಂಡನ್ನಲ್ಲಿ ನಡೆದ ಯುಕೆ ಇಂಡಿಯಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಇಬ್ಬರು ಗಣ್ಯರನ್ನು ಭೇಟಿಯಾದ ಅನಿಲ್ ಶೆಟ್ಟಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಕಿರಣ್ ಮಜುಂದಾರ್-ಶಾ ಅವರಿಗೆ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ತಮ್ಮ ಸಂದೇಶದಲ್ಲಿ, ಸ್ವಂತ ಪರಿಶ್ರಮದಿಂದ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಿದ ಈ ಇಬ್ಬರು ಮಹಿಳಾ ನಾಯಕಿಯರು ಭಾರತದ ಹೆಮ್ಮೆಯ ಪ್ರತೀಕ ಎಂದು ಅನಿಲ್ ಶೆಟ್ಟಿ ಬಣ್ಣಿಸಿದ್ದಾರೆ. ಸಮಾಜ ನಿರ್ಮಿಸಿರುವ ಕಾಣದ ಅಡೆತಡೆಗಳನ್ನು ಮೀರಿ ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ, ಅವರು ಜಗತ್ತಿನ ಭವಿಷ್ಯವನ್ನೇ ರೂಪಿಸುವ ಶಕ್ತಿ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಅವಕಾಶಗಳು ಲಿಂಗದ ಆಧಾರದ ಮೇಲೆ ಅಲ್ಲ, ಪ್ರತಿಭೆ, ಸಾಮರ್ಥ್ಯ ಮತ್ತು ಅರ್ಹತೆಯ ಆಧಾರದ ಮೇಲೆ ಸಿಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ವೇದಿಕೆ ಕಲ್ಪಿಸುವುದು ಸಮಾಜದ ಜವಾಬ್ದಾರಿ,” ಎಂದು ಅನಿಲ್ ಶೆಟ್ಟಿ ಹೇಳಿದ್ದಾರೆ.
ಕಿರಣ್ ಮಜುಂದಾರ್-ಶಾ ಅವರನ್ನು ತಮ್ಮ ಮಾರ್ಗದರ್ಶಕರಲ್ಲಿ ಒಬ್ಬರೆಂದು ಉಲ್ಲೇಖಿಸಿರುವ ಅವರು, ಅವರ ಜಾಗತಿಕ ದೃಷ್ಟಿಕೋನ ಹಾಗೂ ನಾಯಕತ್ವ ತಮ್ಮ ಚಿಂತನೆಗೆ ಮಹತ್ತರ ಪ್ರೇರಣೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದ ಮೂಲಕ ಅನಿಲ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಬೆಳ್ಳಿತೆರೆಗೆ ಆಗಮಿಸುತ್ತಿದ್ದು, ಈ ವೈಜ್ಞಾನಿಕ-ಸಾಮಾಜಿಕ ಥ್ರಿಲ್ಲರ್ ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.


