ಪಂಜಾಬ್ ಅರಣ್ಯ ಇಲಾಖೆಯ ಜೀವ ರಕ್ಷಣೆ: ಆನೆ, ಘರಿಯಾಲ್‌ ಯಶಸ್ವಿ ರಕ್ಷಣೆ

1 Min Read
1 Min Read

ಚಂಡೀಗಢ: ಪಂಜಾಬ್ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣೆಯತ್ತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, 55 ವರ್ಷದ ಹೆಣ್ಣು ಆನೆ ಹಾಗೂ ವಯಸ್ಕ ಘರಿಯಾಲ್ (Gharial) ಅನ್ನು ಯಶಸ್ವಿಯಾಗಿ ರಕ್ಷಿಸಿ ಸುರಕ್ಷಿತ ಸಂರಕ್ಷಣೆಗೆ ಕ್ರಮ ಕೈಗೊಂಡಿದೆ.

ಅರಣ್ಯ ಇಲಾಖೆ ಜುಲೈ 28ರಂದು ಬರ್ನಾಲಾ ಜಿಲ್ಲೆಯಿಂದ ‘ಲಕ್ಷ್ಮಿ’ ಎಂಬ 55 ವರ್ಷದ ಹೆಣ್ಣು ಆನೆಯನ್ನು ರಕ್ಷಿಸಿತ್ತು. ಆನೆಯ ಒಂದು ಕಣ್ಣು ಬಹುತೇಕ ದೃಷ್ಟಿ ಕಳೆದುಕೊಂಡಿದ್ದು, ಇತರ ಗಂಭೀರ ಆರೋಗ್ಯ ಸಮಸ್ಯೆಗಳೂ ಇದ್ದವು.

ರಕ್ಷಣೆ ಬಳಿಕ ಆನೆಯನ್ನು ಮೊಹೀಂದ್ರ ಚೌಧರಿ ಪ್ರಾಣಿಸಂಗ್ರಹಾಲಯ (ಚಟ್ಬೀರ್ ಜೂ), ಡೇರಾ ಬಸ್ಸಿಗೆ ಸ್ಥಳಾಂತರಿಸಿ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ನಿನ್ನೆ ಆನೆಯನ್ನು ಅಲ್ಲಿನ ಪ್ರಾಣಿಸಂಗ್ರಹಾಲಯದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.

ಪ್ರಾಣಿಸಂಗ್ರಹಾಲಯದ ಅಧಿಕಾರಿಗಳ ಪ್ರಕಾರ, ಮುಖ್ಯ ವನ್ಯಜೀವಿ ಸಂರಕ್ಷಣಾಧಿಕಾರಿಯ ನಿರ್ದೇಶನದ ಮೇರೆಗೆ ಆನೆಯ ದುಸ್ಥಿತಿಗೆ ಕಾರಣರಾದ ಖಾಸಗಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಸಂಗ್ರೂರ್ ಜಿಲ್ಲಾ ಅರಣ್ಯಾಧಿಕಾರಿ ಹಾಗೂ ಅವರ ತಂಡ ಪ್ರಮುಖ ಪಾತ್ರವಹಿಸಿತು.

ಇನ್ನೊಂದು ಕಾರ್ಯಾಚರಣೆಯಲ್ಲಿ, ರಾಜಸ್ಥಾನ ಮತ್ತು ಪಂಜಾಬ್ ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ರಾಜಸ್ಥಾನದ ಜೈಸಲ್ಮೇರ್‌ನ ಇಂದಿರಾ ಗಾಂಧಿ ಕಾಲುವೆಯಿಂದ ಸುಮಾರು 12 ಅಡಿ ಉದ್ದದ ವಯಸ್ಕ ಘರಿಯಾಲ್ ಅನ್ನು ರಕ್ಷಿಸಲಾಗಿದೆ.

ಘರಿಯಾಲ್ ಅನ್ನು ಪುನರ್ವಸತಿಗಾಗಿ ಚಟ್ಬೀರ್ ಪ್ರಾಣಿಸಂಗ್ರಹಾಲಯಕ್ಕೆ ತರಲಾಗಿದ್ದು, ವನ್ಯಜೀವಿ ಅಧಿಕಾರಿಗಳ ಅನುಮೋದನೆಯ ಬಳಿಕ ಶೀಘ್ರದಲ್ಲೇ ಬಿಯಾಸ್ ನದಿ ಸಂರಕ್ಷಣಾ ಮೀಸಲು ಪ್ರದೇಶಕ್ಕೆ ಬಿಡುವ ಯೋಜನೆ ಇದೆ.

ಬಿಯಾಸ್ ನದಿ ಸಂರಕ್ಷಣಾ ಮೀಸಲು ಪ್ರದೇಶವು ಪಂಜಾಬ್‌ನಲ್ಲಿ ಘರಿಯಾಲ್‌ಗಳ ಸುರಕ್ಷಿತ ನೈಸರ್ಗಿಕ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ.

Share This Article