ಪಾರದರ್ಶಕತೆ, ಹೊಣೆಗಾರಿಕೆಯಿಂದ ಉತ್ತಮ ಆಡಳಿತ ಸಾಧ್ಯ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ

1 Min Read
1 Min Read

ಜೈಪುರ: ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೂಲಕ ಉತ್ತಮ ಆಡಳಿತವನ್ನು ಖಚಿತಪಡಿಸುವಲ್ಲಿ ವಿಧಾನಮಂಡಲ ಸಂಸ್ಥೆಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ರಾಜಸ್ಥಾನ ವಿಧಾನಸಭೆಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಜೈಪುರದಲ್ಲಿ ಆಯೋಜಿಸಲಾದ ‘ವಿಧಾಯಿ ಗೌರವ ಯಾತ್ರೆ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಲ ವೇಗವಾಗಿ ಬದಲಾಗುತ್ತಿದ್ದು, ಜನರು ಇಂದು ಪ್ರತಿಕ್ರಿಯಾಶೀಲ, ಪಾರದರ್ಶಕ ಹಾಗೂ ಹೊಣೆಗಾರಿಕೆಯ ಆಡಳಿತದ ಜೊತೆಗೆ ಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಿದರು.

ವಿಧಾನಮಂಡಲಗಳು ಪ್ರಜಾಪ್ರಭುತ್ವದ ಪ್ರಮುಖ ವೇದಿಕೆಗಳಾಗಿದ್ದು, ಜನರ ಸಮಸ್ಯೆಗಳು, ಆಶೋತ್ತರಗಳು, ಅಭಿವೃದ್ಧಿ ಕುರಿತ ಅಭಿಪ್ರಾಯಗಳು ಹಾಗೂ ಜನರ ಕಳವಳಗಳನ್ನು ಸರ್ಕಾರದ ಮುಂದಿಡುವ ಜವಾಬ್ದಾರಿಯನ್ನು ನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು. ಈ ಚರ್ಚೆಗಳು ಮತ್ತು ಸಲಹೆಗಳು ಆಡಳಿತದ ಗುಣಮಟ್ಟವನ್ನು ಸುಧಾರಿಸಲು ಅಮೂಲ್ಯವಾಗಿವೆ ಎಂದರು.

ಸಂಸತ್ ಸದಸ್ಯರು ಮತ್ತು ಶಾಸಕರು ಸದನದ ಕಲಾಪಗಳಿಗೆ ಗರಿಷ್ಠ ಹಾಜರಾತಿ ನೀಡುವ ಅಗತ್ಯವನ್ನು ಒತ್ತಿಹೇಳಿದ ಓಂ ಬಿರ್ಲಾ, ವಿಧಾನಮಂಡಲಗಳೇ ಪ್ರಜಾಪ್ರಭುತ್ವದ ನಿಜವಾದ ಪಾಠಶಾಲೆಗಳು, ಇಲ್ಲಿ ಶ್ರೇಷ್ಠ ನಾಯಕರು ರೂಪುಗೊಳ್ಳುತ್ತಾರೆ ಎಂದು ಹೇಳಿದರು.

ಸಂಸತ್ ಹಾಗೂ ರಾಜ್ಯ ವಿಧಾನಮಂಡಲಗಳಲ್ಲಿ ನಡೆಯುವ ಚರ್ಚೆಗಳು, ವಾದ-ವಿವಾದಗಳು ಮತ್ತು ನಿರ್ಣಯಗಳು ಇತಿಹಾಸದ ಶಾಶ್ವತ ದಾಖಲೆಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಜನರು ತಮ್ಮ ಪ್ರತಿನಿಧಿಗಳನ್ನು ಅಪಾರ ನಿರೀಕ್ಷೆಗಳೊಂದಿಗೆ ಆಯ್ಕೆ ಮಾಡುತ್ತಾರೆ. ಅವರು ಸದನದ ಒಳಗೂ ಹೊರಗೂ ಜನಪ್ರತಿನಿಧಿಗಳ ನಡೆ-ನುಡಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಹೇಳಿದರು.

ಪ್ರತಿಯೊಬ್ಬ ಶಾಸಕ ಮತ್ತು ರಾಜಕೀಯ ಪಕ್ಷವೂ ಜನರು ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸಾರ್ವಜನಿಕ ಸೇವೆ ಹಾಗೂ ತಮ್ಮ ಕಾರ್ಯಗಳ ಮೂಲಕ ಹೇಗೆ ಉಳಿಸಿಕೊಳ್ಳಬಹುದು ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಒಂದು ದಿನದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ಭಾಗವಹಿಸಲಿದ್ದಾರೆ.

Share This Article