ನವದೆಹಲಿ: ದೇಶದ ರಾಸಾಯನಿಕ ಕ್ಷೇತ್ರವನ್ನು 2040ರ ವೇಳೆಗೆ 1 ಟ್ರಿಲಿಯನ್ ಡಾಲರ್ ಆರ್ಥಿಕ ಗಾತ್ರದತ್ತ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಿಇಒ ರೌಂಡ್ಟೇಬಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಸಾಯನಿಕ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಅಡೆತಡೆಗಳನ್ನು ಗುರುತಿಸಿ, ಉದ್ಯಮದ ಸಲಹೆಗಳನ್ನು ಕಾಲಮಿತಿಯೊಳಗೆ ಕಾರ್ಯರೂಪಕ್ಕೆ ತರಲು ಸರ್ಕಾರವು ಕೈಗಾರಿಕಾ ವಲಯದೊಂದಿಗೆ ನಿರಂತರ ಹಾಗೂ ಸಾಂಸ್ಥಿಕ ಸಂವಾದ ವ್ಯವಸ್ಥೆಯನ್ನು ಬಲಪಡಿಸಲಿದೆ ಎಂದು ತಿಳಿಸಿದರು.
ಹೂಡಿಕೆ, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು
ರಾಸಾಯನಿಕ ಕ್ಷೇತ್ರದ ಮಹತ್ವಾಕಾಂಕ್ಷಿ ಗುರಿ ಸಾಧಿಸಲು ನಿರಂತರ ಹೂಡಿಕೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ನಡ್ಡಾ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹೂಡಿಕೆ, ನವೀನತೆ, ಸುಸ್ಥಿರತೆ ಹಾಗೂ ದೀರ್ಘಕಾಲೀನ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಉದ್ಯಮ ವಲಯದಿಂದ ಪ್ರಸ್ತಾಪಿಸಲಾದ ಸಮಸ್ಯೆಗಳನ್ನು ಗಮನಕ್ಕೆ ತೆಗೆದುಕೊಂಡು, ಸಂಬಂಧಿತ ಸಚಿವಾಲಯಗಳೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ರಾಸಾಯನಿಕ, ಪೆಟ್ರೋಕೆಮಿಕಲ್ ಕ್ಷೇತ್ರಕ್ಕೆ ಹಲವು ಸುಧಾರಣೆ
ರಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಮಾತನಾಡಿ, ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರ ಹಲವು ಸುಧಾರಣೆಗಳು ಮತ್ತು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
‘ಭವ್ಯ ರಸಾಯನ’, ಕಲ್ಲಿದ್ದಲು ಅನಿಲೀಕರಣ, ಅಪರೂಪದ ಭೂ ಲೋಹಗಳ ಕಾರಿಡಾರ್ಗಳು, ಕ್ರಿಟಿಕಲ್ ಮಿನರಲ್ಸ್ ಮಿಷನ್ ಸೇರಿದಂತೆ ಹಲವು ಉಪಕ್ರಮಗಳನ್ನು ಅವರು ಪ್ರಸ್ತಾಪಿಸಿದರು. ತೆರಿಗೆ ಮತ್ತು ಕಾರ್ಮಿಕ ಕ್ಷೇತ್ರದ ಸುಧಾರಣೆಗಳೂ ಕೈಗಾರಿಕಾ ಬೆಳವಣಿಗೆಗೆ ಪೂರಕವಾಗಿವೆ ಎಂದು ಹೇಳಿದರು.
ಸರ್ಕಾರ ಕೇವಲ ನಿಯಂತ್ರಣಾತ್ಮಕ ವ್ಯವಸ್ಥೆಯಾಗಿ ಉಳಿಯದೆ, ಕೈಗಾರಿಕಾ ಬೆಳವಣಿಗೆಗೆ ಸಕ್ರಿಯ ಪಾಲುದಾರನಾಗಿ ಕಾರ್ಯನಿರ್ವಹಿಸಲಿದೆ. ಆಡಳಿತಾತ್ಮಕ ಹೊರೆ ಕಡಿಮೆ ಮಾಡುವುದರ ಜೊತೆಗೆ ಹೂಡಿಕೆಗಳ ದೀರ್ಘಕಾಲೀನ ಸ್ಥಿರತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅನುಪ್ರಿಯಾ ಪಟೇಲ್ ಹೇಳಿದರು.
ಉದ್ಯಮ-ಸರ್ಕಾರ ಸಹಭಾಗಿತ್ವಕ್ಕೆ ಒತ್ತು
ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಇಲಾಖೆಯ ಕಾರ್ಯದರ್ಶಿ ತೇಜ್ವೀರ್ ಸಿಂಗ್ ಮಾತನಾಡಿ, ದೇಶೀಯ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಸಾಯನಿಕ ಕ್ಷೇತ್ರದಲ್ಲಿ ವ್ಯಾಪಕ ಅವಕಾಶಗಳಿವೆ ಎಂದು ಹೇಳಿದರು.
ಭವಿಷ್ಯದ ನೀತಿ ರೂಪಿಸುವಲ್ಲಿ ಕೈಗಾರಿಕಾ ವಲಯದ ಪ್ರಮುಖರನ್ನು ಒಳಗೊಳ್ಳುವ ಮೂಲಕ ಸರ್ಕಾರದೊಂದಿಗೆ ನಿಕಟ ಸಹಕಾರ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಜಾಗತಿಕ ರಾಸಾಯನಿಕ ಉತ್ಪಾದನಾ ತಾಣವಾಗುವ ಸಾಮರ್ಥ್ಯ ಭಾರತಕ್ಕಿದೆ
ಇನ್ವೆಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ನಿವೃತಿ ರೈ ಮಾತನಾಡಿ, ಬೃಹತ್ ದೇಶೀಯ ಮಾರುಕಟ್ಟೆ, ಕೌಶಲ್ಯಯುತ ಮಾನವ ಸಂಪನ್ಮೂಲ, ಸುಧಾರಿಸುತ್ತಿರುವ ಮೂಲಸೌಕರ್ಯ ಹಾಗೂ ನಿರಂತರ ಸುಧಾರಣೆಗಳ ಹಿನ್ನೆಲೆಯಲ್ಲಿ ರಾಸಾಯನಿಕ ಉತ್ಪಾದನೆಗೆ ಭಾರತ ಪ್ರಮುಖ ಜಾಗತಿಕ ತಾಣವಾಗಿ ಹೊರಹೊಮ್ಮುವ ಉತ್ತಮ ಅವಕಾಶ ಹೊಂದಿದೆ ಎಂದು ಹೇಳಿದರು.


