ನವದೆಹಲಿ: ಪ್ರತಿಪಕ್ಷಗಳ ಪ್ರತಿಭಟನೆ ಹಾಗೂ ಗದ್ದಲದ ಹಿನ್ನೆಲೆಯಲ್ಲಿ ಸಂಸತ್ತಿನ ಮುಂಗಾರು ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿರುವುದರಿಂದ, ವಿಮಾನಯಾನದಂತಹ ಮಹತ್ವಾಕಾಂಕ್ಷೆಯ ಕ್ಷೇತ್ರಗಳಿಗೆ ಸಂಸತ್ತಿನಲ್ಲಿ ಸಿಗಬೇಕಿದ್ದ ಅಗತ್ಯ ಸಮಯ ದೊರೆಯಲಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಸಚಿವರು, ಸಂಸತ್ತಿನ ಕಲಾಪದಲ್ಲಿ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ 28 ಸ್ಟಾರ್ ಪ್ರಶ್ನೆಗಳಿಗೆ ಉತ್ತರಿಸಲು ಎದುರು ನೋಡುತ್ತಿದ್ದೆ ಎಂದು ತಿಳಿಸಿದ್ದಾರೆ.
2013ಕ್ಕೆ ಹೋಲಿಸಿದರೆ ಪ್ರಶ್ನೆಗಳ ಸಂಖ್ಯೆ ದ್ವಿಗುಣ
ಈ ಮುಂಗಾರು ಅಧಿವೇಶನದಲ್ಲಿ ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ 28 ಸ್ಟಾರ್ ಪ್ರಶ್ನೆಗಳು ಪಟ್ಟಿಯಲ್ಲಿದ್ದವು. 2013ರ ಮುಂಗಾರು ಅಧಿವೇಶನದಲ್ಲಿ ಚರ್ಚೆಗೆ ಬಂದಿದ್ದ 14 ಸ್ಟಾರ್ ಪ್ರಶ್ನೆಗಳಿಗೆ ಹೋಲಿಸಿದರೆ ಇದು ಸುಮಾರು ಎರಡು ಪಟ್ಟು ಎಂದು ಸಚಿವರು ಗಮನಸೆಳೆದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ವಿಮಾನ ನಿಲ್ದಾಣಗಳು ಹಾಗೂ ಉತ್ತಮ ವಾಯು ಸಂಪರ್ಕಕ್ಕೆ ಜನರ ಬೇಡಿಕೆ ಮತ್ತು ನಿರೀಕ್ಷೆಗಳು ಹೆಚ್ಚುತ್ತಿರುವುದನ್ನು ಈ ಏರಿಕೆ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಉಡಾನ್’ (UDAN) ಯೋಜನೆಯ ದೃಷ್ಟಿಕೋನದಿಂದ ದೇಶದಾದ್ಯಂತ ವಿಮಾನ ಸಂಪರ್ಕ ವಿಸ್ತರಣೆಗೆ ಹೆಚ್ಚಿನ ಒತ್ತು ದೊರೆತಿದ್ದು, ಇದರ ಪರಿಣಾಮವಾಗಿ ನಾಗರಿಕ ವಿಮಾನಯಾನ ಕ್ಷೇತ್ರದ ಬಗ್ಗೆ ಜನರ ನಿರೀಕ್ಷೆಗಳು ಹೆಚ್ಚಿವೆ ಎಂದು ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.


