ನವದೆಹಲಿ: ದೇಶದಲ್ಲಿ ಸಕ್ಕರೆ ದಾಸ್ತಾನು ಮಾಡುವುದು ಹಾಗೂ ಕಾಳಸಂತೆ ತಡೆದು, ಗ್ರಾಹಕರಿಗೆ ಸಮಂಜಸ ಬೆಲೆಯಲ್ಲಿ ಸಕ್ಕರೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ದೇಶದಾದ್ಯಂತ ಸಕ್ಕರೆ ವ್ಯಾಪಾರಿಗಳಿಗೆ ದಾಸ್ತಾನು (ಸ್ಟಾಕ್) ಮಿತಿ ವಿಧಿಸಲು ಸರ್ಕಾರ ನಿರ್ಧರಿಸಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಈ ಕುರಿತು ಮಾಹಿತಿ ನೀಡಿದ್ದು, ಅಕ್ರಮ ದಾಸ್ತಾನು, ಕಾಳಸಂತೆ ಹಾಗೂ ಬೆಲೆ ಏರಿಕೆಗೆ ಕಾರಣವಾಗುವ ಊಹಾತ್ಮಕ ವಹಿವಾಟು (Speculative Trading) ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.
ಹೊಸ ನಿಯಮದಂತೆ, ಎಲ್ಲಾ ಸಕ್ಕರೆ ವ್ಯಾಪಾರಿಗಳು ತಮ್ಮ ಬಳಿ ಇರುವ ಸಕ್ಕರೆ ದಾಸ್ತಾನು ವಿವರವನ್ನು ಕಡ್ಡಾಯವಾಗಿ ಘೋಷಿಸಬೇಕು. ಅಲ್ಲದೆ, ಪ್ರತಿ ವಾರ ತಮ್ಮ ದಾಸ್ತಾನು ಮಾಹಿತಿಯನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್ಲೈನ್ ಪೋರ್ಟಲ್ನಲ್ಲಿ ನವೀಕರಿಸಬೇಕು.
ಸಚಿವಾಲಯದ ಪ್ರಕಾರ, ಇಲಾಖೆ ಸಕ್ಕರೆ ಮಾರುಕಟ್ಟೆಯ ಮೇಲೆ ನಿರಂತರ ನಿಗಾ ಇರಿಸಿ, ದೇಶದಾದ್ಯಂತ ಸಕ್ಕರೆಯ ಸಮರ್ಪಕ ಲಭ್ಯತೆ ಹಾಗೂ ನ್ಯಾಯಸಮ್ಮತ ಬೆಲೆ ಕಾಯ್ದುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.
ಸಚಿವಾಲಯದ ಹೇಳಿಕೆಯಂತೆ, ಅಕ್ರಮ ದಾಸ್ತಾನು ಮತ್ತು ಊಹಾತ್ಮಕ ವಹಿವಾಟುಗಳಿಂದ ಅನಗತ್ಯ ಬೆಲೆ ಏರಿಳಿತ ಉಂಟಾಗಿದ್ದು, ಕಾರ್ಖಾನೆ ಮಟ್ಟದ (ಎಕ್ಸ್-ಮಿಲ್) ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿನ ಸಕ್ಕರೆ ಬೆಲೆಗಳು ಏರಿಕೆಯಾಗಿವೆ.
ಆದರೆ, ದೇಶದಲ್ಲಿ ದೇಶೀಯ ಬಳಕೆಗೆ ಅಗತ್ಯವಿರುವಷ್ಟು ಸಕ್ಕರೆ ಸಂಗ್ರಹ ಸಮರ್ಪಕವಾಗಿ ಲಭ್ಯವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದೆ.


