ಮಣಿರತ್ನಂ-ವಿಜಯ್ ಸೇತುಪತಿ ಹೊಸ ಚಿತ್ರಕ್ಕೆ ಚಾಲನೆ; ಚಿತ್ರೀಕರಣ ಆರಂಭ

2 Min Read
2 Min Read

ಚೆನ್ನೈ: ಖ್ಯಾತ ನಿರ್ದೇಶಕ ಮಣಿರತ್ನಂ ಹಾಗೂ ನಟ ವಿಜಯ್ ಸೇತುಪತಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಹೊಸ ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಆರಂಭವಾಗಿದೆ. ಇನ್ನೂ ಶೀರ್ಷಿಕೆ ನಿಗದಿಯಾಗದ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಈ ಹಿಂದೆ ಜೂನ್ ತಿಂಗಳಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದರೂ, ಕೆಲ ಕಾರಣಗಳಿಂದ ಅದು ಮುಂದೂಡಲ್ಪಟ್ಟಿತ್ತು. ಇದೀಗ ಚಿತ್ರ ತಂಡ ಅಧಿಕೃತವಾಗಿ ಶೂಟಿಂಗ್‌ಗೆ ಚಾಲನೆ ನೀಡಿದೆ.

ಕಳೆದ ಗುರುವಾರದಿಂದ ವಿಜಯ್ ಸೇತುಪತಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಹೊಸ ಕ್ಲೀನ್-ಶೇವ್ ಲುಕ್ನಲ್ಲಿ ಕಾಣಿಸಿಕೊಂಡ ಅವರು, ಮಣಿರತ್ನಂ ಚಿತ್ರದ ಚಿತ್ರೀಕರಣಕ್ಕಾಗಿ ಕೊಲ್ಕತ್ತಾಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿತ್ರೀಕರಣ ಆರಂಭಕ್ಕೂ ಮುನ್ನ ಚಿತ್ರದ ಪ್ರಮುಖ ಕಲಾವಿದರು ಚೆನ್ನೈನಲ್ಲಿ ಕೆಲವು ದಿನಗಳ ಕಾಲ ವರ್ಕ್‌ಶಾಪ್‌ನಲ್ಲಿ ಭಾಗವಹಿಸಿದ್ದರು. ಬಳಿಕ ತಂಡ ಕೊಲ್ಕತ್ತಾಗೆ ತೆರಳಿ ಶುಕ್ರವಾರದಿಂದ ಶೂಟಿಂಗ್ ಆರಂಭಿಸಿದೆ.

ಈ ಚಿತ್ರವನ್ನು ಮದ್ರಾಸ್ ಟಾಕೀಸ್, ಲೈಕಾ ಪ್ರೊಡಕ್ಷನ್ಸ್ ಹಾಗೂ ಇಂಡಿಯಾ ಟಾಕೀಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತೊಮ್ಮೆ ಮಣಿರತ್ನಂ ಅವರೊಂದಿಗೆ ಕೈಜೋಡಿಸಿದ್ದಾರೆ. ಸದ್ಯಕ್ಕೆ ಚಿತ್ರಕ್ಕೆ ‘ಪ್ರೊಡಕ್ಷನ್ ನಂ. 23’ ಎಂಬ ತಾತ್ಕಾಲಿಕ ಶೀರ್ಷಿಕೆ ನೀಡಲಾಗಿದೆ.

ಚಿತ್ರದ ಕಥೆ, ಪ್ರಕಾರ, ಇತರ ಕಲಾವಿದರು ಹಾಗೂ ತಾಂತ್ರಿಕ ತಂಡದ ಬಗ್ಗೆ ನಿರ್ಮಾಪಕರು ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಈ ಹಿಂದೆ ವಿಜಯ್ ಸೇತುಪತಿ, ಮಣಿರತ್ನಂ ನಿರ್ದೇಶನದ ‘ಚೆಕ್ಕ ಚಿವಂತ ವಾನಂ’ ಚಿತ್ರದಲ್ಲಿ ನಟಿಸಿದ್ದರು. ಈ ಹೊಸ ಸಿನಿಮಾ ಮೂಲಕ ಇಬ್ಬರೂ ಮತ್ತೊಮ್ಮೆ ಒಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಸಾಯಿ ಪಲ್ಲವಿ, ಮಣಿರತ್ನಂ ಹಾಗೂ ವಿಜಯ್ ಸೇತುಪತಿ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಇತ್ತೀಚೆಗೆ ವಿಜಯ್ ಸೇತುಪತಿ ‘ಗಾಂಧಿ ಟಾಕ್ಸ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ‘ಪಾಕೆಟ್ ನೋವೆಲ್’, ‘ಟ್ರೈನ್’, ‘ಅರಸನ್’, ‘ಜೈಲರ್ 2’ ಹಾಗೂ ‘ಸ್ಲಮ್ ಡಾಗ್: 33 ಟೆಂಪಲ್ ರೋಡ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನೊಂದೆಡೆ, ಸಾಯಿ ಪಲ್ಲವಿ ಧನುಷ್ ಅಭಿನಯದ ‘D55’ ಚಿತ್ರದಲ್ಲಿ ನಟಿಸುತ್ತಿದ್ದು, ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದಲ್ಲಿ ಸೀತೆ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Share This Article