ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ: ಮಹತ್ವದ ಮಸೂದೆಗಳ ಮೇಲೆ ಚರ್ಚೆಗೆ ವೇದಿಕೆ
ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಆಗಸ್ಟ್ 13ರವರೆಗೆ ನಡೆಯಲಿದೆ. ಒಟ್ಟು 25 ದಿನಗಳ ಈ ಅಧಿವೇಶನದಲ್ಲಿ 19 ಸಭೆಗಳು ನಡೆಯಲಿದ್ದು, ಹಲವು ಮಹತ್ವದ ಮಸೂದೆಗಳ ಕುರಿತು ಚರ್ಚೆ ಹಾಗೂ ಅಂಗೀಕಾರ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.
ಇಂದಿನ ಕಲಾಪದಲ್ಲಿ ಪ್ರಮುಖ ಮಸೂದೆಗಳು
ಇಂದು ಲೋಕಸಭೆಯಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಮೂರ್ತಿಗಳ ಸಂಖ್ಯೆ) ತಿದ್ದುಪಡಿ ಮಸೂದೆ–2026 ಮಂಡನೆಯಾಗಲಿದ್ದು, ರಾಜ್ಯಸಭೆಯಲ್ಲಿ ರಾಷ್ಟ್ರ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ–2026 ಕುರಿತು ಚರ್ಚೆ ನಡೆಯಲಿದೆ.
ಇದರ ಜೊತೆಗೆ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, ಆದಾಯ ತೆರಿಗೆ (ತಿದ್ದುಪಡಿ) ಮಸೂದೆ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ (MSME) ತಿದ್ದುಪಡಿ ಮಸೂದೆ–2026 ಸೇರಿದಂತೆ ಹಲವು ಪ್ರಮುಖ ಮಸೂದೆಗಳ ಮೇಲೂ ಈ ಅಧಿವೇಶನದಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.
ಸರ್ವಪಕ್ಷ ಸಭೆಯಲ್ಲಿ ಸುಗಮ ಕಲಾಪಕ್ಕೆ ಮನವಿ
ಮುಂಗಾರು ಅಧಿವೇಶನದ ಪೂರ್ವಭಾವಿಯಾಗಿ ಭಾನುವಾರ ಸಂಸತ್ ಭವನದಲ್ಲಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿತು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ 40 ರಾಜಕೀಯ ಪಕ್ಷಗಳ 50ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು.
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಂಸತ್ತಿನ ಕಲಾಪ ಸುಗಮವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಹಾಗೂ ರಾಷ್ಟ್ರದ ಪ್ರಮುಖ ವಿಷಯಗಳ ಕುರಿತು ರಚನಾತ್ಮಕ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದರು.
ಸಂಸದೀಯ ಸಂಪ್ರದಾಯ ಪಾಲನೆಗೆ ಓಂ ಬಿರ್ಲಾ ಕರೆ
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಭಾನುವಾರ ಲೋಕಸಭೆಯ ಕಾರ್ಯಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಧಿವೇಶನದಲ್ಲಿ ಕೈಗೆತ್ತಿಕೊಳ್ಳಲಿರುವ ಶಾಸನಾತ್ಮಕ ಮತ್ತು ಇತರ ಕಾರ್ಯಸೂಚಿಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಈ ವೇಳೆ ಮಾತನಾಡಿದ ಓಂ ಬಿರ್ಲಾ, ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆ, ಅರ್ಥಪೂರ್ಣ ಭಾಗವಹಿಸುವಿಕೆ ಹಾಗೂ ಉನ್ನತ ಸಂಸದೀಯ ಸಂಪ್ರದಾಯಗಳ ಪಾಲನೆ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.


