ಮಧ್ಯಪ್ರದೇಶದಲ್ಲಿ ಮುಂಗಾರು ಅಬ್ಬರ: ಇಂದು ಉಜ್ಜಯಿನಿ, ಗ್ವಾಲಿಯರ್-ಚಂಬಲ್ ಭಾಗಗಳಿಗೆ ಪ್ರವೇಶ ಸಾಧ್ಯತೆ
ಮಧ್ಯಪ್ರದೇಶದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಉಜ್ಜಯಿನಿ ಹಾಗೂ ಗ್ವಾಲಿಯರ್-ಚಂಬಲ್ ವಿಭಾಗಗಳಿಗೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ನಿನ್ನೆ ಸಾಗರ್ ಹಾಗೂ ಭೋಪಾಲ್ ವಿಭಾಗಗಳ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಇಂದೋರ್ ಮತ್ತು ಮಹೂ ಪ್ರದೇಶಗಳಲ್ಲಿ ಸುರಿದ ಭಾರೀ ಮಳೆಯಿಂದ ಹಲವು ಕಡೆ ನೀರು ನಿಂತಿದ್ದು, ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನಲ್ಲಿ ಸಿಲುಕಿ ಹಲವು ವಾಹನಗಳು ಸ್ಥಗಿತಗೊಂಡ ಘಟನೆಗಳು ವರದಿಯಾಗಿವೆ.
ಸೀಹೋರ್ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವು ವಸತಿ ಕಾಲೊನಿಗಳಿಗೆ ಮಳೆ ನೀರು ನುಗ್ಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ, ಇಂದು ರಾಜ್ಯದ ಹಲವು ಭಾಗಗಳಲ್ಲಿ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಮುಂದಿನ 24 ಗಂಟೆಗಳ ಅವಧಿಗೆ ಹಾರ್ದಾ, ನರ್ಮದಾಪುರಂ, ರೈಸೇನ್, ಛಿಂದ್ವಾರಾ, ಪಾಂಧುರ್ಣಾ ಮತ್ತು ಬಾಲಾಘಾಟ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇದೇ ವೇಳೆ ಅಶೋಕನಗರ, ದೇವಾಸ್, ಖಂಡ್ವಾ, ಬೇತುಲ್, ಸಾಗರ್, ಮಂಡ್ಲಾ ಮತ್ತು ದಿನ್ಡೋರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದಲ್ಲದೆ, ಭೋಪಾಲ್, ಇಂದೋರ್, ಉಜ್ಜಯಿನಿ ಸೇರಿದಂತೆ 40ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


