57 ದಿನಗಳ ಶ್ರೀ ಅಮರನಾಥ ಯಾತ್ರೆಗೆ ಅಧಿಕೃತ ಚಾಲನೆ; ಮೊದಲ ತಂಡ ಜಮ್ಮುವಿನಿಂದ ರವಾನೆ

1 Min Read
1 Min Read

ಶ್ರೀ ಅಮರನಾಥ ಯಾತ್ರೆಗೆ ಚಾಲನೆ: ಮೊದಲ ತಂಡದ ಯಾತ್ರಿಕರಿಗೆ ಎಲ್‌ಜಿ ಮನೋಜ್ ಸಿನ್ಹಾ ಹಸಿರು ನಿಶಾನೆ

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಜಮ್ಮುವಿನಿಂದ ಶ್ರೀ ಅಮರನಾಥ ಯಾತ್ರೆ–2026ರ ಮೊದಲ ತಂಡದ ಯಾತ್ರಿಕರಿಗೆ ಹಸಿರು ನಿಶಾನೆ ತೋರಿಸುವ ಮೂಲಕ ವಾರ್ಷಿಕ ಪವಿತ್ರ ಯಾತ್ರೆಗೆ ಅಧಿಕೃತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸದ ಜುಗಲ್ ಕಿಶೋರ್ ಶರ್ಮಾ, ಯಾತ್ರೆ ಸುಗಮವಾಗಿ ನಡೆಯುವ ವಿಶ್ವಾಸ ವ್ಯಕ್ತಪಡಿಸಿ, ಭಕ್ತರಲ್ಲಿ ಈ ಬಾರಿ ಹೆಚ್ಚಿನ ಉತ್ಸಾಹ ಕಂಡುಬರುತ್ತಿದೆ ಎಂದು ಹೇಳಿದರು.

ಜಮ್ಮು-ಕಾಶ್ಮೀರ ವಿಧಾನಸಭೆಯ ಪ್ರತಿಪಕ್ಷ ನಾಯಕ ಹಾಗೂ ಬಿಜೆಪಿ ಮುಖಂಡ ಸುನೀಲ್ ಶರ್ಮಾ ಅವರು ಕೂಡ ಯಾತ್ರಿಕರಿಗೆ ಶುಭಾಶಯ ಕೋರಿದರು. ಶ್ರೀ ಅಮರನಾಥ ಶ್ರೈನ್ ಬೋರ್ಡ್ ಕೈಗೊಂಡಿರುವ ಸಮರ್ಪಕ ವ್ಯವಸ್ಥೆಗಳು ಯಾತ್ರಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲಿವೆ ಎಂದು ಅವರು ತಿಳಿಸಿದರು. ಈ ಬಾರಿ ಯಾತ್ರಿಕರ ಸಂಖ್ಯೆ ಹಿಂದಿನ ಎಲ್ಲ ದಾಖಲೆಗಳನ್ನು ಮೀರಬಹುದು ಎಂಬ ನಿರೀಕ್ಷೆಯನ್ನೂ ವ್ಯಕ್ತಪಡಿಸಿದರು.

ಕಾಶ್ಮೀರ ಕಣಿವೆಯ ಬಾಲ್ತಾಲ್ ಮತ್ತು ಪಹಲ್ಗಾಮ್ ಬೇಸ್ ಕ್ಯಾಂಪ್‌ಗಳಲ್ಲಿ ಭಕ್ತರು ‘ಬಮ್ ಬಮ್ ಭೋಲೆ’ ಘೋಷಣೆಗಳೊಂದಿಗೆ ಭಕ್ತಿಭಾವದಲ್ಲಿ ಯಾತ್ರೆಯನ್ನು ಸ್ವಾಗತಿಸಿದರು.

ಯಾತ್ರೆಯ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉಧಂಪುರ್ ಭಾಗದಲ್ಲಿ ಸಿಆರ್‌ಪಿಎಫ್ 137ನೇ ಬೆಟಾಲಿಯನ್ ಹಾಗೂ ಶ್ವಾನದಳ (K9 Unit) ಯಾತ್ರೆ ಆರಂಭಕ್ಕೂ ಮುನ್ನ ಸಂಪೂರ್ಣ ತಪಾಸಣೆ ಹಾಗೂ ಭದ್ರತಾ ಪರಿಶೀಲನೆ ನಡೆಸಿತು.

57 ದಿನಗಳ ಈ ಪವಿತ್ರ ಅಮರನಾಥ ಯಾತ್ರೆ ನಾಳೆಯಿಂದ ಅಧಿಕೃತವಾಗಿ ಪಹಲ್ಗಾಮ್ ಮತ್ತು ಬಾಲ್ತಾಲ್ ಎಂಬ ಎರಡು ಮಾರ್ಗಗಳಲ್ಲಿ ಆರಂಭವಾಗಲಿದ್ದು, ಆಗಸ್ಟ್ 28ರಂದು ಸಮಾಪ್ತಿಯಾಗಲಿದೆ.

ಯಾತ್ರಿಕರು ಅನಂತನಾಗ್ ಜಿಲ್ಲೆಯ 48 ಕಿ.ಮೀ. ಉದ್ದದ ನುನ್ವಾನ್–ಪಹಲ್ಗಾಮ್ ಸಾಂಪ್ರದಾಯಿಕ ಮಾರ್ಗ ಹಾಗೂ ಗಂದೇರ್‌ಬಲ್ ಜಿಲ್ಲೆಯ 14 ಕಿ.ಮೀ. ಉದ್ದದ ಬಾಲ್ತಾಲ್ ಮಾರ್ಗದ ಮೂಲಕ ಗುಹಾ ದೇವಾಲಯವನ್ನು ತಲುಪಲಿದ್ದಾರೆ. ಭದ್ರತಾ ಕಾರಣಗಳಿಂದ ಮೊಘಲ್ ರಸ್ತೆ ಹಾಗೂ ಧರ್ ರಸ್ತೆ ಮಾರ್ಗಗಳನ್ನು ಯಾತ್ರೆಗೆ ನಿಷೇಧಿಸಲಾಗಿದೆ.

Share This Article
Leave a Comment