ಬೆಂಗಳೂರು: ಸ್ಯಾಂಡಲ್ವುಡ್ನ ಹಿರಿಯ ನಟ, ಹಾಸ್ಯನಟ ಹಾಗೂ ನೈಸರ್ಗಿಕ ಅಭಿನಯದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಎಂ.ಎಸ್. ಉಮೇಶ್ (79) ಅವರು ಭಾನುವಾರ ತೀವ್ರ ಅನಾರೋಗ್ಯದಿಂದ ವಿಧಿವಶರಾದರು.
ಕೊನೆಯ ಕೆಲವು ವಾರಗಳಿಂದ ಆರೋಗ್ಯದಲ್ಲಿ ಹದಗೆಟ್ಟಿದ್ದ ಉಮೇಶ್ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗದಲ್ಲಿ ಶೋಕಸಂವೇದನೆ ವ್ಯಕ್ತವಾಗಿದೆ.
ರಂಗಭೂಮಿಯಿಂದ ಬೆಳೆದ ನಟ
1945ರ ಏಪ್ರಿಲ್ 22ರಂದು ಮೈಸೂರಿನಲ್ಲಿ ಜನಿಸಿದ ಎಂ.ಎಸ್. ಉಮೇಶ್, 1960ರ ದಶಕದಿಂದಲೇ ರಂಗಭೂಮಿಯಲ್ಲಿ ತಮ್ಮ ನಟನಾ ಪಯಣ ಆರಂಭಿಸಿದರು. ನಂತರ ಚಿತ್ರರಂಗಕ್ಕೆ ಪ್ರವೇಶಿಸಿ, ಹಾಸ್ಯದಿಂದ ಗಂಭೀರ ಪಾತ್ರಗಳವರೆಗೆ ಅನೇಕ ಪಾತ್ರಗಳಲ್ಲಿ ಕನ್ನಡಿಗರ ಮನಸೂರೆಗೊಂಡರು.
350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವಿಸ್ಮರಣೀಯ ಪಾತ್ರಗಳು
ಐದು ದಶಕಗಳಿಗಿಂತ ಹೆಚ್ಚು ಕಾಲ ಸಕ್ರಿಯರಾಗಿದ್ದ ಉಮೇಶ್ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ ಜೋಡಿ, ಗುರು ಶಿಷ್ಯರು, ಹಾಲು ಜೇನು, ಕಾಮನಬಿಲ್ಲು, ಅಪೂರ್ವ ಸಂಗಮ, ಜಾಕಿ, ರ್ಯಾಂಬೋ, ಮುಸ್ಸಂಜೆ ಮಾತು, ಹಗಲುವೇಷ ಸೇರಿದಂತೆ ಅನೇಕ ಚಿತ್ರಗಳಲ್ಲಿ ತಮ್ಮ ವಿಶಿಷ್ಟ ಅಭಿನಯ ತೋರಿಸಿದ್ದಾರೆ.
ಮಗುವಿನ ನಿಸ್ಸಹಾಯಕತೆಯ ಮಿಶ್ರ ಹಾಸ್ಯ – ಉಮೇಶ್ ಅವರ ವಿಶೇಷತೆ
“ಅಯ್ಯಯ್ಯೋ ಇವ್ರೂ ನನ್ನ ಅಪಾರ್ಥ ಮಾಡ್ಕೊಂಡ್ಬಿಟ್ಟ್ರಲ್ಲ… ನಾನೇನೂ ಬೇಕು ಅಂತ ಮಾಡ್ಲಿಲ್ಲ… ಹೇಳ್ಕೊಳ್ಳೋಣ ಅಂದ್ರೆ ನನ್ಹೆಂಡ್ತಿ ಊರಲ್ಲಿಲ್ವೇ…” ಈ ರೀತಿ ತಮ್ಮ ವೈಶಿಷ್ಟ್ಯಪೂರ್ಣ ಡೈಲಾಗ್ ಡೆಲಿವರಿಯಿಂದ ಅವರು ಕನ್ನಡಿಗರ ಮನೆಯಲ್ಲಿ ಕುಟುಂಬಸದಸ್ಯರಾದಂತೆ ನಟಿಸಿದ್ದರು.
ಹಾಸ್ಯ, ಭಾವನೆ, ಸರಳ ಮಾತುಗಳ ಮೂಲಕ ಜನಮನ ಗೆದ್ದ ಎಂ.ಎಸ್.ಉಮೇಶ್ ಅವರ ನಿಧನದಿಂದ ಸಂಪೂರ್ಣ ಕನ್ನಾಡ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ.


