ಜೈಲಿನಲ್ಲಿ ಉಗ್ರರಿಗೆ ಐಷಾರಾಮಿ ಸೌಲಭ್ಯ – ಕಾಂಗ್ರೆಸ್‌ ಪ್ರಾಯೋಜಿತ ಕೃತ್ಯ!” ಎಂದು ಆಕ್ರೋಶಗೊಂಡ ಆರ್‌. ಅಶೋಕ್

1 Min Read
1 Min Read

ಬೆಂಗಳೂರು, ನ.10:
ರಾಜ್ಯದಲ್ಲಿನ ಜೈಲುಗಳಲ್ಲಿ ಉಗ್ರರಿಗೆ ಐಷಾರಾಮಿ ಸೌಲಭ್ಯ ಒದಗಿಸಲಾಗಿದೆ ಎಂದು ಆರೋಪಿಸಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ರೇಸ್‌ ಕೋರ್ಸ್ ರಸ್ತೆಯಲ್ಲಿ ನಡೆದ ಪ್ರತಿಭಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಯೋತ್ಪಾದಕರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರವು ಉಗ್ರರನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದು, ಜೈಲುಗಳೊಳಗೆ ಬಾಂಬ್‌, ಗಾಂಜಾ, ಮಾಂಸ ಮತ್ತು ಮೊಬೈಲ್ ಫೋನ್‌ಗಳು ಮುಕ್ತವಾಗಿ ಸಂಚರಿಸುತ್ತಿವೆ ಎಂದು ಹೇಳಿದರು.

ಅವರು ಹೇಳಿದರು, ರಾಜ್ಯದ ಜೈಲುಗಳಲ್ಲಿ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಅವುಗಳನ್ನು ಒಂದೇ ಬಾರಿ ಆಫ್‌ ಮಾಡಲಾಗಿದೆ, ಇದು ಗಂಭೀರ ಪ್ರಶ್ನೆ ಎಬ್ಬಿಸುತ್ತದೆ. ಕೈದಿಗಳು ಮೊಬೈಲ್‌ಗಳ ಮೂಲಕ ಬ್ಲಾಕ್‌ಮೇಲ್‌ ಮಾಡಿ ಹಣ ಸಂಪಾದಿಸುತ್ತಿದ್ದಾರೆ, ಆದರೆ ಪೊಲೀಸರು ಇದಕ್ಕೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದರು.

ಗುಪ್ತಚರ ದಳ ನಿಷ್ಕ್ರಿಯವಾಗಿದೆ, ಪೊಲೀಸ್ ಇಲಾಖೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಕಿಡಿ ಹೊರಹಾಕಿದರು. ಕಾಂಗ್ರೆಸ್ ಸರ್ಕಾರವು ಉಗ್ರರಿಗೆ “ಗ್ಯಾರಂಟಿ ಸರ್ಕಾರದಂತೆಯೇ” ಉಚಿತ ರಾಜಾತಿಥ್ಯ ನೀಡುತ್ತಿದೆ ಎಂದು ಟೀಕಿಸಿದರು.

ಅವರು ಮುಂದುವರಿಸಿ, ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೈಲು ವ್ಯವಸ್ಥೆ ಕುರಿತು ಯಾವುದೇ ವರದಿ ತರಿಸಿಕೊಂಡಿಲ್ಲ ಎಂದು ಆರೋಪಿಸಿದರು. ನಟ ದರ್ಶನ್ ಸಿಗರೇಟ್ ಸೇದ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಂಡಿತ್ತು, ಆದರೆ ಭಯೋತ್ಪಾದಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಪ್ರಶ್ನಾರ್ಹ ಎಂದು ಹೇಳಿದರು.

ಕಾಂಗ್ರೆಸ್‌ನ ಮೃದು ಧೋರಣೆ ಮತ್ತು ರಾಜಕೀಯ ಕಚ್ಚಾಟದ ಮಧ್ಯೆ, ರಾಜ್ಯದ ಗೃಹಸಚಿವ ಡಾ. ಜಿ. ಪರಮೇಶ್ವರ್ ಸಹ ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯರಾಗಿದ್ದಾರೆ ಎಂದು ಅವರು ಆರೋಪಿಸಿದರು. ಈ ನಿಲುವು ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.

Share This Article
Leave a Comment