ಬೆಂಗಳೂರು: ‘ಬಿಗ್ಬಾಸ್ ಕನ್ನಡ 13’ ರಿಯಾಲಿಟಿ ಶೋ ಆರಂಭದಲ್ಲೇ ಅನಿರೀಕ್ಷಿತ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಿದೆ. ನಟಿ ಪ್ರತಮಾ ಪ್ರಸಾದ್ ಅವರು ಬಿಗ್ಬಾಸ್ನ ಮುಖ್ಯ ಮನೆಗೆ ಪ್ರವೇಶಿಸುವ ಅವಕಾಶವೇ ಪಡೆಯದೆ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ಬಾಸ್ ಇತಿಹಾಸದಲ್ಲೇ ಮುಖ್ಯ ಮನೆ ಪ್ರವೇಶಿಸದೇ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಎಂಬ ದಾಖಲೆಯನ್ನು ಪ್ರತಮಾ ಪ್ರಸಾದ್ ನಿರ್ಮಿಸಿದ್ದಾರೆ.
ಮೊದಲ ವಾರದ ಎಲಿಮಿನೇಷನ್ಗೆ ಪ್ರತಮಾ ಪ್ರಸಾದ್ ಅವರೊಂದಿಗೆ ಕಿರಣ್ ಶಾಸ್ತ್ರಿ, ವೈಷ್ಣವಿ ಕೌಂಡಿನ್ಯ, ಅವಿನಾಶ್ ಮತ್ತು ಧನುಷ್ ನಾಮಿನೇಟ್ ಆಗಿದ್ದರು. ವೀಕ್ಷಕರಿಂದ ಕಡಿಮೆ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಪ್ರತಮಾ ಶೋನಿಂದ ಹೊರಬಿದ್ದಿದ್ದಾರೆ. ಎಲಿಮಿನೇಷನ್ ಬಳಿಕ ಅವರಿಗೆ ₹3 ಲಕ್ಷ ನಗದು ಬಹುಮಾನ ನೀಡಲಾಗಿದೆ.
15 ವರ್ಷಗಳ ಕನ್ನಡಿಗರ ಪ್ರೀತಿ ನೆನೆದ ಪ್ರತಮಾ
ಎಲಿಮಿನೇಷನ್ ಬಳಿಕ ನಿರೂಪಕ ಕಿಚ್ಚ ಸುದೀಪ್ ಅವರೊಂದಿಗೆ ಮಾತನಾಡಿದ ಪ್ರತಮಾ, ಮನರಂಜನಾ ಕ್ಷೇತ್ರದಲ್ಲಿನ ತಮ್ಮ ಪಯಣ ಹಾಗೂ ಕನ್ನಡ ಪ್ರೇಕ್ಷಕರು ನೀಡಿದ ಪ್ರೀತಿಯನ್ನು ಭಾವುಕರಾಗಿ ಸ್ಮರಿಸಿದರು.
ಕಳೆದ 15 ವರ್ಷಗಳಿಂದ ಕನ್ನಡ ಪ್ರೇಕ್ಷಕರು ತಮ್ಮ ಮೇಲೆ ಅಪಾರ ಪ್ರೀತಿ ತೋರಿದ್ದಾರೆ. ನೃತ್ಯ, ನಟನೆಯೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಾವು ಗುರುತಿಸಿಕೊಂಡಿದ್ದು, ಬಿಗ್ಬಾಸ್ ತಮ್ಮ ಪಾಲಿಗೆ ಅತ್ಯಂತ ವಿಶೇಷ ವೇದಿಕೆಯಾಗಿತ್ತು ಎಂದು ಪ್ರತಮಾ ಹೇಳಿದ್ದಾರೆ.
ಜನರ ಮಾತು ಕೇಳದಿದ್ದರೆ ಕಷ್ಟವಾಗಬಹುದು ಎಂದಿದ್ದರು!
ಬಿಗ್ಬಾಸ್ ಕನ್ನಡ 13ರ ಆರಂಭಿಕ ಸಂಚಿಕೆಯಲ್ಲಿ ಸುದೀಪ್ ಅವರು ಮನೆಯೊಳಗೆ ಎದುರಾಗಬಹುದಾದ ದೊಡ್ಡ ಸವಾಲಿನ ಬಗ್ಗೆ ಪ್ರತಮಾ ಅವರನ್ನು ಪ್ರಶ್ನಿಸಿದ್ದರು.
ತಾವು ಹೇಳುತ್ತಿರುವ ವಿಚಾರವನ್ನು ಅರ್ಥಮಾಡಿಕೊಳ್ಳಲು ಅಥವಾ ಕೇಳಿಸಿಕೊಳ್ಳಲು ಸಿದ್ಧರಿಲ್ಲದ ಜನರೊಂದಿಗೆ ವ್ಯವಹರಿಸುವುದು ಕಷ್ಟವಾಗಬಹುದು ಎಂದು ಆ ಸಂದರ್ಭದಲ್ಲಿ ಪ್ರತಮಾ ಹೇಳಿಕೊಂಡಿದ್ದರು.
ವಿನಯಾ ಪ್ರಸಾದ್ ಪುತ್ರಿ ಎಂಬ ಹೆಮ್ಮೆ, ಸ್ವಂತ ಗುರುತಿನ ಹುಡುಕಾಟ
ಪ್ರತಮಾ ಪ್ರಸಾದ್ ಅವರು ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ. ವಿನಯಾ ಪ್ರಸಾದ್ ಅವರ ಪುತ್ರಿ ಎಂಬ ಗುರುತು ತಮಗೆ ಹೆಮ್ಮೆಯ ವಿಷಯವಾದರೂ, ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಕಟ್ಟಿಕೊಳ್ಳಲು ಸಾಕಷ್ಟು ಪ್ರಯತ್ನಿಸಿರುವುದಾಗಿ ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ.
“ನಾನು ನಟಿ, ನೃತ್ಯಗಾರ್ತಿ, ಈಜುಗಾರ್ತಿ ಹಾಗೂ ತಾಯಿ. ವಿನಯಾ ಪ್ರಸಾದ್ ಅವರ ಮಗಳು ಎಂದು ಜನರು ಗುರುತಿಸಿದಾಗ ನನಗೆ ಹೆಮ್ಮೆ ಮತ್ತು ಸಂತೋಷವಾಗುತ್ತದೆ. ಆದರೆ ನಾನು ಸ್ವಂತವಾಗಿ ಏನು ಸಾಧಿಸಿದ್ದೇನೆ ಎಂದು ಕೆಲವರು ಕೇಳಿದಾಗ ಸ್ವಲ್ಪ ನೋವಾಗುತ್ತದೆ” ಎಂಬ ಅರ್ಥದಲ್ಲಿ ಅವರು ಬಿಗ್ಬಾಸ್ ವೇದಿಕೆಯಲ್ಲಿ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದರು.
ನೃತ್ಯದಿಂದ ನಟನೆಯವರೆಗೆ ವೈವಿಧ್ಯಮಯ ಪಯಣ
ಕಲಾತ್ಮಕ ವಾತಾವರಣದಲ್ಲಿ ಬೆಳೆದ ಪ್ರತಮಾ ಅವರು ಕಥಕ್ ನೃತ್ಯದಲ್ಲಿ ತರಬೇತಿ ಪಡೆದಿದ್ದಾರೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹಲವು ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.
‘ಸಾಯಿ ಟು ಡ್ಯಾನ್ಸ್ ಸೀಸನ್ 2’ ಮೂಲಕ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟ ಅವರು, ಬಳಿಕ ‘ಬೊಂಬೆಯಾಟವಯ್ಯ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ‘ದೇವಿ’, ‘ಅಮೃತವರ್ಷಿಣಿ’ ಮತ್ತು ‘ಕರಿಮಣಿ’ ಸೇರಿದಂತೆ ಜನಪ್ರಿಯ ಧಾರಾವಾಹಿಗಳಲ್ಲಿ ಅಭಿನಯಿಸಿದರು.
‘ಕರಿಮಣಿ’ ಧಾರಾವಾಹಿ ಮುಕ್ತಾಯಗೊಂಡ ಬಳಿಕವೇ ಪ್ರತಮಾ ಅವರು ‘ಬಿಗ್ಬಾಸ್ ಕನ್ನಡ 13’ಕ್ಕೆ ಪ್ರವೇಶಿಸಿದ್ದರು. ಅವರ ಬಿಗ್ಬಾಸ್ ಪ್ರವೇಶ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ ಮುಖ್ಯ ಬಿಗ್ಬಾಸ್ ಮನೆಗೆ ಕಾಲಿಡುವ ಮುನ್ನವೇ ಮೊದಲ ವಾರದಲ್ಲಿ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಈ ಮೂಲಕ ‘ಬಿಗ್ಬಾಸ್ ಕನ್ನಡ’ ಇತಿಹಾಸದಲ್ಲೇ ವಿಭಿನ್ನ ರೀತಿಯ ಎಲಿಮಿನೇಷನ್ಗೆ ಪ್ರತಮಾ ಪ್ರಸಾದ್ ಸಾಕ್ಷಿಯಾಗಿದ್ದಾರೆ.


