ಅಕ್ಟೋಬರ್ 23ಕ್ಕೆ ‘ಬಿರ್ಬಲ್ ಟ್ರಿಲಜಿ ಕೇಸ್ 2’: ಶಿವಣ್ಣ ಎಂಟ್ರಿಯಿಂದ ಮತ್ತಷ್ಟು ಕುತೂಹಲ

2 Min Read
2 Min Read

ಬೆಂಗಳೂರು: ಕನ್ನಡದ ತನಿಖಾ ಥ್ರಿಲ್ಲರ್ ಸಿನಿಮಾ ‘ಬಿರ್ಬಲ್ ಟ್ರಿಲಜಿ ಕೇಸ್ 2’ ಬಿಡುಗಡೆಗೆ ಸಜ್ಜಾಗಿದೆ. KVN Productions ಹಾಗೂ ನಿರ್ದೇಶಕ ಶ್ರೀನಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅಕ್ಟೋಬರ್ 23ರಂದು ಸಿನಿಮಾ ಚಿತ್ರಮಂದಿರಗಳಿಗೆ ಬರಲಿದೆ.

ಚಿತ್ರದಲ್ಲಿ ನಿರ್ದೇಶಕ ಹಾಗೂ ನಟ ಶ್ರೀನಿ ಮತ್ತೊಮ್ಮೆ ವಕೀಲ ಮಹೇಶ್ ದಾಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಹೊಸ ಲುಕ್‌ನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ.

ಮತ್ತೊಂದು ರೋಚಕ ಪ್ರಕರಣದೊಂದಿಗೆ ಮಹೇಶ್ ದಾಸ್

‘ಬಿರ್ಬಲ್ ಟ್ರಿಲಜಿ ಕೇಸ್ 1: ಫೈಂಡಿಂಗ್ ವಜ್ರಮುನಿ’ ಚಿತ್ರದಲ್ಲಿ ಕೊಲೆ ಪ್ರಕರಣವೊಂದನ್ನು ನ್ಯಾಯಾಲಯದ ಹಂತದಲ್ಲಿ ತನಿಖೆ ನಡೆಸುವ ವಕೀಲ ಮಹೇಶ್ ದಾಸ್‌ರನ್ನು ಪ್ರೇಕ್ಷಕರು ಕಂಡಿದ್ದರು. ಇದೀಗ ಎರಡನೇ ಭಾಗದಲ್ಲಿ ಮಹೇಶ್ ದಾಸ್ ಮತ್ತೊಂದು ಪ್ರಕರಣವನ್ನು ಕೈಗೆತ್ತಿಕೊಳ್ಳಲಿದ್ದು, ಹೊಸ ರಹಸ್ಯವೇನು ಎಂಬುದನ್ನು ಚಿತ್ರತಂಡ ಸದ್ಯಕ್ಕೆ ಬಹಿರಂಗಪಡಿಸಿಲ್ಲ.

ಮೊದಲ ಭಾಗವು ಕೋರ್ಟ್‌ರೂಮ್ ಡ್ರಾಮಾ ಮತ್ತು ತನಿಖಾ ಅಂಶಗಳ ಮೂಲಕ ಗಮನ ಸೆಳೆದಿತ್ತು. ಹೀಗಾಗಿ ಎರಡನೇ ಪ್ರಕರಣದ ಕಥೆ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

‘ಘೋಸ್ಟ್’ ಜತೆ ಕನೆಕ್ಷನ್; ಶಿವರಾಜ್‌ಕುಮಾರ್ ವಿಶೇಷ ಪಾತ್ರ

‘ಬಿರ್ಬಲ್ ಟ್ರಿಲಜಿ ಕೇಸ್ 2’ ಚಿತ್ರಕ್ಕೆ ಶ್ರೀನಿ ನಿರ್ದೇಶನದ ‘ಘೋಸ್ಟ್’ ಸಿನಿಮಾದ ಕನೆಕ್ಷನ್ ಕೂಡ ಇರಲಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಶ್ರೀನಿ ನಿರ್ಮಿಸುತ್ತಿರುವ ‘ಶ್ರೀನಿ ಸಿನಿಮ್ಯಾಟಿಕ್ ಯೂನಿವರ್ಸ್’ ಮತ್ತಷ್ಟು ವಿಸ್ತರಿಸಲಿದೆ.

ಚಿತ್ರದಲ್ಲಿ ಖುಷ್ಬು ಸುಂದರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಆ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಇದೇ ವೇಳೆ ಡೈಸಿ ಬೋಪಣ್ಣ ಕೂಡ ಬಹುಕಾಲದ ಬಳಿಕ ಬೆಳ್ಳಿತೆರೆಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಯೋಗಲಕ್ಷ್ಮೀ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸಂಪತ್ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸೆಪ್ಟೆಂಬರ್ 27ಕ್ಕೆ ಟೀಸರ್

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಬಿಡುಗಡೆ ದಿನಾಂಕ ಅಂತಿಮವಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಪ್ರಚಾರ ಕಾರ್ಯಗಳಿಗೆ ವೇಗ ನೀಡುತ್ತಿದೆ. ಸೆಪ್ಟೆಂಬರ್ 27ರಂದು ‘ಬಿರ್ಬಲ್ ಟ್ರಿಲಜಿ ಕೇಸ್ 2’ ಚಿತ್ರದ ಟೀಸರ್ ಬಿಡುಗಡೆ ಮಾಡುವ ಯೋಜನೆಯನ್ನು ನಿರ್ಮಾಪಕರು ಹೊಂದಿದ್ದಾರೆ.

ಮಹೇಶ್ ದಾಸ್ ಮತ್ತೊಂದು ನಿಗೂಢ ಪ್ರಕರಣವನ್ನು ಹೇಗೆ ಭೇದಿಸಲಿದ್ದಾರೆ, ಶಿವರಾಜ್‌ಕುಮಾರ್ ಅವರ ವಿಶೇಷ ಪಾತ್ರ ‘ಬಿರ್ಬಲ್’ ಕಥಾಹಂದರಕ್ಕೆ ಹೇಗೆ ಕನೆಕ್ಟ್ ಆಗಲಿದೆ ಎಂಬುದು ಚಿತ್ರದ ಪ್ರಮುಖ ಕುತೂಹಲಗಳಾಗಿವೆ.

Share This Article