ಚೆನ್ನೈ: ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಮಲಯಾಳಂ ಚಿತ್ರ ‘ಮುಖುಂದನ್ ಉಣ್ಣಿ ಅಸೋಸಿಯೇಟ್ಸ್’ (Mukundan Unni Associates) ಅನ್ನು ವೀಕ್ಷಿಸಿ ಚಿತ್ರ ಹಾಗೂ ಅದರ ತಂಡವನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಅನುರಾಗ್ ಅವರ ಈ ಮೆಚ್ಚುಗೆಗೆ ಚಿತ್ರದ ನಾಯಕ ವಿನೀತ್ ಶ್ರೀನಿವಾಸನ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ನಿರ್ದೇಶಕ ಅಭಿನವ್ ಸುಂದರ್ ನಾಯಕ್ ಅವರೊಂದಿಗೆ ಅವರ ಹೊಸ ಸಿನಿಮಾ ವೀಕ್ಷಿಸಿದ್ದ ಅನುರಾಗ್ ಕಶ್ಯಪ್, ಬಳಿಕ ಅಭಿನವ್ ಅವರ ಮೊದಲ ನಿರ್ದೇಶನದ ಚಿತ್ರವಾದ ‘ಮುಖುಂದನ್ ಉಣ್ಣಿ ಅಸೋಸಿಯೇಟ್ಸ್’ ಕೂಡ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿನೀತ್ ಶ್ರೀನಿವಾಸನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅನುರಾಗ್ ಕಶ್ಯಪ್ ಅವರ ಪ್ರತಿಕ್ರಿಯೆಯ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಅದರಲ್ಲಿ, “ಅದ್ಭುತ ಸಿನಿಮಾ. ಅತ್ಯುತ್ತಮವಾಗಿ ಬರೆಯಲಾಗಿದೆ ಮತ್ತು ನಿರೂಪಿಸಲಾಗಿದೆ. ವಿನೀತ್ ಶ್ರೀನಿವಾಸನ್ ಅವರ ಅಭಿನಯ ಬಹಳ ಮೆಚ್ಚುವಂತಿದೆ. ನಿರ್ದೇಶಕರ ಜೊತೆಗೆ ಈ ಚಿತ್ರ ವೀಕ್ಷಿಸಿದ ಅನುಭವವೂ ವಿಶೇಷವಾಗಿತ್ತು. ಅಭಿನವ್ ಅವರ ಅಭಿಮಾನಿಯಾಗಿದ್ದೇನೆ” ಎಂದು ಅನುರಾಗ್ ಬರೆದಿದ್ದಾರೆ.
ಈ ಮೆಚ್ಚುಗೆಗೆ ಪ್ರತಿಕ್ರಿಯಿಸಿದ ವಿನೀತ್, “ನನ್ನ ಮನಸ್ಸಿನಲ್ಲಿ ತುಂಬಾ ಭಾವನೆಗಳಿವೆ. ಭಾರತದ ನನ್ನ ನೆಚ್ಚಿನ ನಿರ್ದೇಶಕರಲ್ಲಿ ಒಬ್ಬರಿಂದ ಇಂತಹ ಮಾತುಗಳನ್ನು ಓದಿದ ಬಳಿಕ ಏನು ಬರೆಯಬೇಕು ಎಂಬುದೇ ತಿಳಿಯುತ್ತಿಲ್ಲ. ಈ ಪೋಸ್ಟ್ ಅನ್ನು ನಾಳೆ ಅಳಿಸಿಬಿಡಬಹುದು. ಏಕೆಂದರೆ ಇದನ್ನು ಹಂಚಿಕೊಳ್ಳುವುದು ನನ್ನ ಬಗ್ಗೆ ನಾನೇ ಹೆಮ್ಮೆಪಡುತ್ತಿರುವಂತೆ ಅನಿಸಬಹುದು. ಆದರೆ ಇಂದು ರಾತ್ರಿ ಈ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಇದರ ಜೊತೆಗೆ, ತಮ್ಮನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿದ್ದಕ್ಕಾಗಿ ಹಾಗೂ ಚಿತ್ರವನ್ನು ಅನುರಾಗ್ ಕಶ್ಯಪ್ ಅವರಿಗೆ ತೋರಿಸಿದ್ದಕ್ಕಾಗಿ ನಿರ್ದೇಶಕ ಅಭಿನವ್ ಸುಂದರ್ ನಾಯಕ್ ಅವರಿಗೆ ವಿನೀತ್ ಧನ್ಯವಾದ ಅರ್ಪಿಸಿದ್ದಾರೆ.
“ಅನುರಾಗ್ ಕಶ್ಯಪ್ ಸರ್ ನನ್ನ ಹೆಸರನ್ನು ಉಲ್ಲೇಖಿಸಿರುವುದು ನನಗೆ ಕನಸಿನ ಕ್ಷಣ. 13ನೇ ವಯಸ್ಸಿನಲ್ಲಿ ‘ಸತ್ಯ’ ಸಿನಿಮಾ ನೋಡಿದ್ದ ಆ ಹುಡುಗನಿಗೆ ಇದು ಮರೆಯಲಾಗದ ಅನುಭವ” ಎಂದು ಅವರು ಭಾವುಕರಾಗಿದ್ದಾರೆ.
ವಿನೀತ್ ಅವರ ಪೋಸ್ಟ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಅಭಿನವ್ ಸುಂದರ್ ನಾಯಕ್, ಈ ಪೋಸ್ಟ್ ಅನ್ನು ಅಳಿಸಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ.
ಗಮನಾರ್ಹ ಸಂಗತಿಯೆಂದರೆ, ಅನುರಾಗ್ ಕಶ್ಯಪ್ ಕಥೆ ಬರೆದ ‘ಸತ್ಯ’ (1998) ಚಿತ್ರವು ಭಾರತೀಯ ಸಿನೆಮಾದ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇದೇ ವೇಳೆ, ‘ಮುಖುಂದನ್ ಉಣ್ಣಿ ಅಸೋಸಿಯೇಟ್ಸ್’ ಚಿತ್ರದ ಸೀಕ್ವೆಲ್ ನಿರ್ಮಾಣದ ಯೋಜನೆಯೂ ನಡೆಯುತ್ತಿದೆ ಎಂಬ ಮಾಹಿತಿ ಇತ್ತೀಚೆಗೆ ಹೊರಬಿದ್ದಿತ್ತು.


