ನೇಪಾಳದಲ್ಲಿ ರಕ್ಷಣಾ ಕಾರ್ಯಕ್ಕೆ ಉಪಕರಣಗಳ ಕೊರತೆ: ಬಾಡಿ ಬ್ಯಾಗ್, ಹಗ್ಗ, ಹೆಲಿಕಾಪ್ಟರ್‌ಗಳಿಗಾಗಿ ಪರದಾಟ

2 Min Read
2 Min Read

ಕಠ್ಮಂಡು: ಭೀಕರ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರೂ, ಅಗತ್ಯವಿರುವ ವಿಶೇಷ ಉಪಕರಣಗಳ ಕೊರತೆ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಬಾಡಿ ಬ್ಯಾಗ್‌ಗಳು, ಹಗ್ಗಗಳು, ಆಧುನಿಕ ರಕ್ಷಣಾ ಸಾಧನಗಳು ಹಾಗೂ ಹೆಲಿಕಾಪ್ಟರ್‌ಗಳ ಕೊರತೆಯಿಂದ ದುರ್ಗಮ ಪ್ರದೇಶಗಳಲ್ಲಿ ಸಿಲುಕಿರುವವರನ್ನು ತಲುಪುವುದು ಕಷ್ಟವಾಗುತ್ತಿದೆ.

ಆಗಸ್ಟ್ 26ರಂದು ನೇಪಾಳ-ಟಿಬೆಟ್ ಗಡಿ ಭಾಗದಲ್ಲಿ ಹಿಮ ಮತ್ತು ಬಂಡೆಗಳ ಕುಸಿತ ಅಥವಾ ಹಿಮಪಾತ ಸಂಭವಿಸಿದ ಬಳಿಕ ಈ ದುರಂತ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ಭೋಟೆಕೋಶಿ ನದಿ ಪ್ರದೇಶದಲ್ಲಿ ಭಾರಿ ಪ್ರಮಾಣದ ನೀರು ಹರಿದು ಮನೆಗಳು, ರಸ್ತೆಗಳು ಮತ್ತು ಸೇತುವೆಗಳಿಗೆ ಹಾನಿಯಾಗಿದೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿ ಸಂಭವಿಸಿದೆ.

ಸಾವಿನ ಸಂಖ್ಯೆ 939ಕ್ಕೆ ಏರಿಕೆ

ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರ (NDRRMA) ನೀಡಿರುವ ಮಾಹಿತಿಯಂತೆ, ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 939ಕ್ಕೆ ಏರಿಕೆಯಾಗಿದೆ. ಇನ್ನೂ 4,247ಕ್ಕೂ ಹೆಚ್ಚು ಮಂದಿ ಪತ್ತೆಯಾಗಿಲ್ಲ.

ಚಿತ್ವಾನ್ ಜಿಲ್ಲೆಯಲ್ಲಿ 279 ಮೃತದೇಹಗಳು ಪತ್ತೆಯಾಗಿದ್ದರೆ, ಪೂರ್ವ ನವಲ್ಪರಾಸಿಯಲ್ಲಿ 216, ಪಶ್ಚಿಮ ನವಲ್ಪರಾಸಿಯಲ್ಲಿ 168, ನುವಾಕೋಟ್‌ನಲ್ಲಿ 95, ಗೋರಖಾದಲ್ಲಿ 65, ಧಾದಿಂಗ್‌ನಲ್ಲಿ 55, ತನಹುನಲ್ಲಿ 38 ಹಾಗೂ ರಾಸುವಾದಲ್ಲಿ 23 ಮೃತದೇಹಗಳು ಪತ್ತೆಯಾಗಿವೆ.

ದುರ್ಗಮ ಪ್ರದೇಶಗಳಿಗೆ ತಲುಪಲು ಹೆಲಿಕಾಪ್ಟರ್‌ಗಳ ಕೊರತೆ

ನೇಪಾಳ ಸೇನೆ, ನೇಪಾಳ ಪೊಲೀಸ್ ಮತ್ತು ಸಶಸ್ತ್ರ ಪೊಲೀಸ್ ಪಡೆಗಳ ಸಾವಿರಾರು ಸಿಬ್ಬಂದಿಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಆದರೆ ಅಪಾಯಕಾರಿ ಹಾಗೂ ದುರ್ಗಮ ಭೌಗೋಳಿಕ ಪ್ರದೇಶಗಳಲ್ಲಿ ಆಧುನಿಕ ರಕ್ಷಣಾ ಉಪಕರಣಗಳ ಕೊರತೆಯಿಂದ ಕಾರ್ಯಾಚರಣೆ ನಿಧಾನಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂರದ ಪ್ರದೇಶಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲು ಭದ್ರತಾ ಸಿಬ್ಬಂದಿ ಹಲವು ಬಾರಿ ಹೆಲಿಕಾಪ್ಟರ್‌ಗಳ ನೆರವು ಕೋರಿದ್ದಾರೆ. ಕೆಲವರು ಪೊಲೀಸ್ ಕಂಟ್ರೋಲ್ 100ಕ್ಕೆ ಕರೆ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದರೂ, ಕಾರ್ಯಾಚರಣೆಯ ತಾಂತ್ರಿಕ ಹಾಗೂ ಭೌಗೋಳಿಕ ಸಮಸ್ಯೆಗಳಿಂದ ತಕ್ಷಣ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಸಂದರ್ಭಗಳೂ ಎದುರಾಗಿವೆ.

ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಈ ಪ್ರವಾಹವನ್ನು ‘ಅಭೂತಪೂರ್ವ ಮತ್ತು ವಿನಾಶಕಾರಿ ನೈಸರ್ಗಿಕ ವಿಕೋಪ’ ಎಂದು ಬಣ್ಣಿಸಿದ್ದಾರೆ. ಸುಮಾರು 21 ಸಾವಿರ ಭದ್ರತಾ ಸಿಬ್ಬಂದಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ರೆಡ್‌ಕ್ರಾಸ್ ಅಂದಾಜಿನ ಪ್ರಕಾರ, 90 ಸಾವಿರಕ್ಕೂ ಹೆಚ್ಚು ಜನರು ದುರಂತದಿಂದ ಬಾಧಿತರಾಗಿದ್ದಾರೆ.

ರಕ್ಷಣಾ ಕಾರ್ಯಕ್ಕೆ ಭಾರತದ ನೆರವು

ನೇಪಾಳದ ರಕ್ಷಣಾ ಕಾರ್ಯಾಚರಣೆ ಹಾಗೂ ಮೃತರ ಗುರುತು ಪತ್ತೆ ಕಾರ್ಯಕ್ಕೆ ಭಾರತವೂ ವಿಶೇಷ ತಂಡಗಳನ್ನು ಕಳುಹಿಸಿದೆ. ಕಠ್ಮಂಡುವಿನಲ್ಲಿ ಭಾರತೀಯ ಫೋರೆನ್ಸಿಕ್ ತಜ್ಞರ 19 ಸದಸ್ಯರ ತಂಡ ಡಿಎನ್‌ಎ ವಿಶ್ಲೇಷಣೆ ಮೂಲಕ ಮೃತದೇಹಗಳ ಗುರುತು ಪತ್ತೆ ಕಾರ್ಯ ಆರಂಭಿಸಿದೆ.

ಇದರ ಜತೆಗೆ, ಚಿಲಿಮೆ ಮತ್ತು ಲಾಂಗ್‌ಟಾಂಗ್ ಪ್ರದೇಶಗಳಲ್ಲಿರುವ ಜಲವಿದ್ಯುತ್ ಯೋಜನೆಗಳಲ್ಲಿ ಭಾರತೀಯ ಸುರಂಗ ರಕ್ಷಣಾ ತಂಡ ಕಾರ್ಯಾಚರಣೆ ಮುಂದುವರಿಸಿದೆ.

ಆಗಸ್ಟ್ 26ರಿಂದ ಸಂಪರ್ಕಕ್ಕೆ ಸಿಗದಿರುವ ವಿವಿಧ ಜಲವಿದ್ಯುತ್ ಯೋಜನೆಗಳ 933 ಕಾರ್ಮಿಕರು ಮತ್ತು ಸಿಬ್ಬಂದಿಯ ಪತ್ತೆಗೆ ತಜ್ಞರು ನೇಪಾಳದ ರಕ್ಷಣಾ ಸಿಬ್ಬಂದಿಗೆ ನೆರವಾಗುತ್ತಿದ್ದಾರೆ. ಇವರಲ್ಲಿ ಹಲವರು ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳ ಪತ್ತೆ ಮತ್ತು ಗುರುತು, ದುರ್ಗಮ ಪ್ರದೇಶಗಳಲ್ಲಿ ಸಿಲುಕಿರುವವರ ರಕ್ಷಣೆ ಹಾಗೂ ಹಾನಿಗೊಳಗಾದ ಮೂಲಸೌಕರ್ಯಗಳ ನಡುವೆ ಕಾರ್ಯಾಚರಣೆ ನಡೆಸುವುದು ನೇಪಾಳದ ರಕ್ಷಣಾ ತಂಡಗಳಿಗೆ ಸದ್ಯದ ಪ್ರಮುಖ ಸವಾಲಾಗಿದೆ.

Share This Article