ಭುವನೇಶ್ವರ/ಪುರಿ: ಒಡಿಶಾದ ಪುರಿಯಲ್ಲಿ ನಡೆಯುವ ವಿಶ್ವವಿಖ್ಯಾತ ಶ್ರೀ ಜಗನ್ನಾಥ ರಥಯಾತ್ರೆ ಇಂದು ಭಕ್ತಿಭಾವದಿಂದ ಆರಂಭವಾಗಲಿದೆ. ಈ ಮಹೋತ್ಸವದಲ್ಲಿ ಶ್ರೀ ಜಗನ್ನಾಥ, ಅವರ ಹಿರಿಯ ಸಹೋದರ ಬಲಭದ್ರ ಹಾಗೂ ಸಹೋದರಿ ದೇವಿ ಸುಭದ್ರಾ ಭವ್ಯ ರಥಗಳಲ್ಲಿ ಭಕ್ತರಿಗೆ ದರ್ಶನ ನೀಡಲಿದ್ದಾರೆ.
ಪ್ರತಿ ವರ್ಷ ನಡೆಯುವ ಈ ಐತಿಹಾಸಿಕ ರಥಯಾತ್ರೆಯ ಸಂದರ್ಭದಲ್ಲಿ, ಶ್ರೀ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ಅವರು ಶ್ರೀ ಜಗನ್ನಾಥ ದೇವಸ್ಥಾನದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯ ಮೂಲಕ ತೆರಳುತ್ತಾರೆ. ಗುಂಡಿಚಾ ದೇವಸ್ಥಾನವನ್ನು ಶ್ರೀ ಜಗನ್ನಾಥನ ಮಾವನ ಮನೆ (ತಾಯಿಯ ಸಹೋದರಿಯ ಮನೆ) ಎಂದು ಭಕ್ತರು ಭಾವಿಸಿ ಪೂಜಿಸುತ್ತಾರೆ.
ದೇವರುಗಳು ಗುಂಡಿಚಾ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಾಸ್ತವ್ಯ ಹೂಡಲಿದ್ದು, ಬಳಿಕ ಬಹುದಾ ಯಾತ್ರೆ (ಹಿಂತಿರುಗುವ ರಥಯಾತ್ರೆ) ಮೂಲಕ ಇದೇ ರಥಗಳಲ್ಲಿ ಮತ್ತೆ ಶ್ರೀ ಜಗನ್ನಾಥ ದೇವಸ್ಥಾನಕ್ಕೆ ಮರಳಲಿದ್ದಾರೆ.
ಈ ವರ್ಷದ ರಥಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಹುಹಂತದ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪುರಿ ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ ತಿಳಿಸಿದೆ. ರಥಯಾತ್ರೆ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಲು ಆಡಳಿತ ಹಾಗೂ ಭದ್ರತಾ ಸಿಬ್ಬಂದಿ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ.


