ಕಂಬಳದ ಸೊಗಡಿನ ‘ಕರಾವಳಿ’ ಟ್ರೈಲರ್ ಬಿಡುಗಡೆ; ಜುಲೈ 24ಕ್ಕೆ ತೆರೆಗೆ ಪ್ರಜ್ವಲ್ ದೇವರಾಜ್ ಸಿನಿಮಾ

2 Min Read
2 Min Read

ಬೆಂಗಳೂರು: ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೈಲರ್ ಮಂಗಳವಾರ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಜುಲೈ 24ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದ್ದು, ಟ್ರೈಲರ್ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಗುರುದತ್ ಗಣಿಗ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ, ರಮೇಶ್ ಇಂದಿರಾ, ಮಿತ್ರಾ, ಸಂಪದಾ, ಸುಷ್ಮಿತಾ ಹಾಗೂ ಗೋವಿಂದೆ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಂಬಳದ ಸೊಗಡಿನ ಸೇಡಿನ ಕಥೆ

ಟ್ರೈಲರ್‌ನಲ್ಲಿ ಕರಾವಳಿ ಕರ್ನಾಟಕದ ಸಂಸ್ಕೃತಿ, ಸಂಪ್ರದಾಯ ಮತ್ತು ಕಂಬಳ ಕ್ರೀಡೆಯನ್ನು ಕಥೆಯ ಪ್ರಮುಖ ಅಂಶವಾಗಿ ಕಟ್ಟಿಕೊಡಲಾಗಿದೆ.

ಕಂಬಳ ಓಟಗಾರನ ಮನದಲ್ಲಿರುವ ಜ್ವಾಲೆಯೊಂದಿಗೆ ಆರಂಭವಾಗುವ ಟ್ರೈಲರ್, ಕುಲ್ಕುಂದದಲ್ಲಿ ಹುಟ್ಟಿದ ದಂತಕಥೆಯ ಎಮ್ಮೆಗಳಿಂದ ಆರಂಭವಾಗಿ 70 ಕಿಲೋಮೀಟರ್ ದೂರದ ಕರಾವಳಿಯಲ್ಲಿ ಆರಂಭವಾಗುವ ಸಂಘರ್ಷದ ಕಥೆಯನ್ನು ಪರಿಚಯಿಸುತ್ತದೆ.

ಚಿತ್ರದಲ್ಲಿ ಮಹಾಬಲನ ಎಮ್ಮೆಗಳು ಇದುವರೆಗೆ ಯಾವುದೇ ಕಂಬಳ ಸ್ಪರ್ಧೆಯಲ್ಲಿ ಗೆಲುವು ಸಾಧಿಸದ ದಾಖಲೆ ಹೊಂದಿರುವಂತೆ ತೋರಿಸಲಾಗಿದ್ದು, ಅದನ್ನು ಕೇಂದ್ರವಾಗಿಟ್ಟುಕೊಂಡು ಸೇಡು, ಕುಟುಂಬ, ಪ್ರೀತಿ, ಹಾಸ್ಯ ಹಾಗೂ ಸಸ್ಪೆನ್ಸ್‌ ಅಂಶಗಳನ್ನು ಬೆರೆಸಲಾಗಿದೆ.

ಸುಮಾರು 30 ವರ್ಷಗಳಿಂದ ನಿಂತಿರುವ ಕಂಬಳ, ಹಲವು ತಲೆಮಾರುಗಳಿಂದ ಮುಂದುವರಿದ ದ್ವೇಷ ಹಾಗೂ ಅದರಿಂದ ಉಂಟಾದ ಜೀವಹಾನಿಯ ಸುಳಿವನ್ನೂ ಟ್ರೈಲರ್ ನೀಡುತ್ತದೆ. ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪಾತ್ರಗಳ ನಡುವಿನ ಸಂಬಂಧವನ್ನು ಚಿತ್ರತಂಡ ಇನ್ನೂ ರಹಸ್ಯವಾಗಿಯೇ ಉಳಿಸಿದೆ.

‘ಇದು ಶುದ್ಧ ಕನ್ನಡ ಸಿನಿಮಾ’ ಎಂದ ರಾಜ್ ಬಿ. ಶೆಟ್ಟಿ

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ ಬಿ. ಶೆಟ್ಟಿ, “‘ಕರಾವಳಿ’ ಒಂದು ಶುದ್ಧ ಕನ್ನಡ ಸಿನಿಮಾ. ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಎಂದು ಪ್ರಚಾರ ಮಾಡುತ್ತಿಲ್ಲ. ಆದರೆ, ಇದರ ಕಥೆ ಎಲ್ಲೆಡೆ ಇರುವ ಪ್ರೇಕ್ಷಕರನ್ನು ತಲುಪಲಿ ಎಂಬುದು ನಮ್ಮ ಆಶಯ,” ಎಂದು ಹೇಳಿದರು.

380 ಎಮ್ಮೆಗಳೊಂದಿಗೆ ಚಿತ್ರೀಕರಣ ಸವಾಲು

ನಿರ್ದೇಶಕ ಗುರುದತ್ ಗಣಿಗ, ಪ್ರಜ್ವಲ್ ದೇವರಾಜ್ ಅವರ ಡಬ್ಬಿಂಗ್ ಹಾಗೂ ಸಂಭಾವನೆ ಕುರಿತಾಗಿ ಹರಿದಾಡಿದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದರು.

ಇದೇ ವೇಳೆ, ಸುಮಾರು 380 ಎಮ್ಮೆಗಳೊಂದಿಗೆ ಚಿತ್ರೀಕರಣ ನಡೆಸುವುದು ಚಿತ್ರತಂಡಕ್ಕೆ ಅತ್ಯಂತ ದೊಡ್ಡ ಸವಾಲಾಗಿತ್ತು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ನಟಿಯರಾದ ಮಿತ್ರಾ, ಸಂಪದಾ, ಸುಷ್ಮಿತಾ, ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್, ವಿತರಕ ಸುಪ್ರೀತ್ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.

ಗುರುದತ್ ಗಣಿಗ ಫಿಲ್ಮ್ಸ್, ವಿ.ಕೆ. ಫಿಲ್ಮ್ಸ್ ಹಾಗೂ ಸುರಂ ಮೂವೀಸ್ ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸಿ ವಿತರಣೆ ಮಾಡುತ್ತಿದೆ.

Share This Article