ಭಾರತ–ಚೀನಾ ಗಡಿ ವಿವಾದಕ್ಕೆ ರಾಜಕೀಯ ಪರಿಹಾರಕ್ಕೆ ಒತ್ತು; ಮಾತುಕತೆ ಮುಂದುವರಿಸಲು ಉಭಯ ರಾಷ್ಟ್ರಗಳ ಒಪ್ಪಿಗೆ

1 Min Read
1 Min Read

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಗಡಿ ಪ್ರಶ್ನೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ. ಎರಡೂ ದೇಶಗಳ ಒಟ್ಟಾರೆ ಹಾಗೂ ದೀರ್ಘಾವಧಿಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ನಿರ್ಧರಿಸಲಾಗಿದೆ.

ಭಾರತ–ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದಯುತ ವಾತಾವರಣವನ್ನು ಕಾಪಾಡುವುದು ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿ ಹಾಗೂ ಪ್ರಗತಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಭಾರತ ಒತ್ತಿಹೇಳಿದೆ.

ಚೀನಾದ ಬೀಜಿಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾರತ–ಚೀನಾ ಗಡಿ ಪ್ರಶ್ನೆಗೆ ಸಂಬಂಧಿಸಿದ ವಿಶೇಷ ಪ್ರತಿನಿಧಿಗಳ 25ನೇ ಸುತ್ತಿನ ಮಾತುಕತೆಯ ಸಹ-ಅಧ್ಯಕ್ಷತೆ ವಹಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯ ಪ್ರಕಾರ, ಉಭಯ ದೇಶಗಳ ವಿಶೇಷ ಪ್ರತಿನಿಧಿಗಳು ಭಾರತ–ಚೀನಾ ಗಡಿ ಪ್ರಶ್ನೆಯ ಕುರಿತು ಮುಕ್ತ ಹಾಗೂ ಆಳವಾದ ವಿಚಾರ ವಿನಿಮಯ ನಡೆಸಿದರು. ಒಟ್ಟಾರೆ ಮತ್ತು ದೀರ್ಘಾವಧಿಯ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಗಡಿ ಪ್ರಶ್ನೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.

2024ರ ಅಕ್ಟೋಬರ್‌ನಲ್ಲಿ ಕಝಾನ್‌ನಲ್ಲಿ ಹಾಗೂ ಕಳೆದ ವರ್ಷದ ಆಗಸ್ಟ್‌ನಲ್ಲಿ ಟಿಯಾಂಜಿನ್‌ನಲ್ಲಿ ಉಭಯ ರಾಷ್ಟ್ರಗಳ ನಾಯಕರ ನಡುವೆ ಮೂಡಿಬಂದ ಪ್ರಮುಖ ಒಮ್ಮತಗಳನ್ನು ಜಾರಿಗೊಳಿಸುವಲ್ಲಿ ಆಗಿರುವ ಪ್ರಗತಿಯನ್ನೂ ಎರಡೂ ಕಡೆಯವರು ಗಮನಿಸಿದರು.

ಇದೇ ವೇಳೆ, ಜನರಿಂದ ಜನರಿಗೆ ಸಂಪರ್ಕ ಹಾಗೂ ಗಡಿ ಪ್ರದೇಶಗಳ ನಡುವಿನ ವಿನಿಮಯಗಳು ಕ್ರಮೇಣ ಪುನರಾರಂಭಗೊಂಡಿರುವುದಕ್ಕೆ ಉಭಯ ರಾಷ್ಟ್ರಗಳು ತೃಪ್ತಿ ವ್ಯಕ್ತಪಡಿಸಿದವು. ಕೈಲಾಸ ಮಾನಸ ಸರೋವರ ಯಾತ್ರೆ ಹಾಗೂ ನಿಗದಿತ ಮೂರು ಗಡಿ ವ್ಯಾಪಾರ ಮಾರ್ಗಗಳ ಮೂಲಕ ನಡೆಯುತ್ತಿರುವ ಗಡಿ ವ್ಯಾಪಾರವೂ ಇದರಲ್ಲಿ ಸೇರಿದೆ.

ಮಾತುಕತೆಯಲ್ಲಿ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಬಗ್ಗೆಯೂ ಚರ್ಚೆ ನಡೆಯಿತು. ಎರಡು ದಿನಗಳ ಚೀನಾ ಪ್ರವಾಸದಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಚೀನಾದ ಉಪಾಧ್ಯಕ್ಷ ಹಾನ್ ಝೆಂಗ್ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದರು.

Share This Article