ಸಿದ್ದರಾಮಯ್ಯ ಹೇಳಿಕೆ ಬಳಿಕ ಡಿಕೆ ಪರ ಶಾಸಕರ ದೌಡು – ದೆಹಲಿಯಲ್ಲಿ ರಾಜಕೀಯ ಹೈಡ್ರಾಮಾ!

2 Min Read
2 Min Read

ಬೆಂಗಳೂರು, ನವೆಂಬರ್ 20:
ರಾಜ್ಯ ರಾಜಕೀಯದಲ್ಲಿ ‘ಸಿಎಂ ಬದಲಾವಣೆ’ ಚರ್ಚೆ ತಾರಕಕ್ಕೇರಿದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿರುವ ಕೆಲವರು ದಿಢೀರ್ ದೆಹಲಿ ಪ್ರಯಾಣ ಕೈಗೊಳ್ಳುವ ಮೂಲಕ ರಾಜಕೀಯ ವಲಯದಲ್ಲಿ ಹೊಸ ಕುತೂಹಲಕ್ಕೆ ಕಾರಣರಾಗಿದ್ದಾರೆ. ಅಧಿಕಾರ ಹಂಚಿಕೆ ವಿವಾದ ಮತ್ತೊಮ್ಮೆ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಾಗ ಡಿಕೆಶಿ ಬೆಂಬಲಿಗರ ರಾಜಧಾನಿ ದೌಡ್ಯ ವಿಶೇಷ ಗಮನಸೆಳೆಯುತ್ತಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಪಕ್ಷದೊಳಗೆ ಅಧಿಕಾರ ಹಂಚಿಕೆ ವಿಷಯ ಮತ್ತೆ ತೀವ್ರವಾಗಿದೆ. ಡಿಕೆ ಶಿವಕುಮಾರ್ ಪರ ಶಾಸಕರು ನೇರವಾಗಿ ದೆಹಲಿಯಲ್ಲಿ ಹೈಕಮಾಂಡ್ ಮುಂದೆ ತಮ್ಮ ನಾಯಕನ ಶಕ್ತಿಯನ್ನು ತೋರಿಸಲು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ, “ಮುಂದಿನ ಎರಡೂವರೆ ವರ್ಷ ನಾನು ಮುಖ್ಯಮಂತ್ರಿಯಾಗಿಯೇ ಮುಂದುವರೆಯುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಮಾಡಿದ ಘೋಷಣೆ ಪಕ್ಷದ ಒಳಜಗಳಕ್ಕೆ ಹೊಸ ಚೈತನ್ಯ ತುಂಬಬಲ್ಲ ಬೆಳವಣಿಗೆಯಾಗಿದೆ. ಈ ಹೇಳಿಕೆ ಬಳಿಕ ಡಿಕೆ ಶಿಬಿರ ಮತ್ತಷ್ಟು ಚಟುವಟಿಕೆ ತೀವ್ರಗೊಳಿಸಿದೆ.


2018 ನೆನಪಿಗೆ ತಂದ ‘ಅಧಿಕಾರ ಸೂತ್ರ’

2023ರ ವಿಧಾನಸಭಾ ಚುನಾವಣೆಯ ನಂತರ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆಗ ಹೈಕಮಾಂಡ್ ಮಧ್ಯ ಪ್ರವೇಶಿಸಿ, ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಲು ಮನವೊಲಿಸಿತ್ತು. ಪಕ್ಷದ ಒಳಗಿನ ‘ಅಧಿಕಾರ ಹಂಚಿಕೆ ಸೂತ್ರ’ ಪ್ರಕಾರ – ಎರಡೂವರೆ ವರ್ಷಗಳ ನಂತರ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಗಳಿದ್ದವು ಎಂದು ಆಗ ವರದಿಗಳು ತಿಳಿಸಿಸಿದ್ದವು.

ಆದರೆ ಪಕ್ಷ ಅಧಿಕೃತವಾಗಿ ಯಾವಾಗಲೂ ಈ ವಿಷಯವನ್ನು ದೃಢಪಡಿಸಿಲ್ಲ. ಇದೀಗ ಸಿದ್ದರಾಮಯ್ಯ ಇದನ್ನು ಸಂಪೂರ್ಣ ನಿರಾಕರಿಸಿ, “ಐದು ವರ್ಷಗಳ ಕಾಲ ನಾನು ಸಿಎಂ ಆಗಿಯೇ ಇರ್ತೇನೆ” ಎಂಬ ತಮ್ಮ ನಿಲುವನ್ನು ಪುನರುಚ್ಚರಿಸಿದ್ದಾರೆ.


ದೆಹಲಿಗೆ ಶಾಸಕರ ಚಟುವಟಿಕೆ ಹೆಚ್ಚಳ

ಡಿಕೆ ಶಿಬಿರದ ಚಟುವಟಿಕೆ ಈಗ ಮತ್ತಷ್ಟು ವೇಗ ಪಡೆದಿದೆ. ಮೂಲಗಳ ಪ್ರಕಾರ, ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಇಕ್ಬಾಲ್ ಹುಸೇನ್, ಹಚ್.ಸಿ. ಬಾಲಕೃಷ್ಟ ಮತ್ತು ಎಸ್.ಆರ್. ಶ್ರೀನಿವಾಸ್ ಗುರುವಾರವೇ ದೆಹಲಿಗೆ ತೆರಳಿದ್ದಾರೆ.

ಹೆಚ್ಚುವರಿಯಾಗಿ, ಶುಕ್ರವಾರ ಇನ್ನೂ 10-12 ಶಾಸಕರು ದೆಹಲಿಗೆ ಸೇರಲಿದ್ದಾರೆ ಎಂದು ಊಹಿಸಲಾಗಿದೆ. ಕೆಲ ದಿನಗಳ ಹಿಂದೆ ಸುಮಾರು ಒಂದು ಡಜನ್ ಎಂಎಲ್‌ಸಿಗಳು ಕೂಡ ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.


ರಾಜಕೀಯ ವಲಯದಲ್ಲಿ ಕುತೂಹಲ

ದೆಹಲಿಯ ದೌಡ್ಯ ಮತ್ತು ನಾಯಕತ್ವ ಚರ್ಚೆಗಳು ಈಗ ಪಕ್ಷದೊಳಗಿನ ಸಮೀಕರಣಗಳನ್ನು ಮತ್ತಷ್ಟು ರೋಚಕ ಮಾಡುವ ಸೂಚನೆ ಕೊಡುತ್ತಿವೆ.

ಮುಂದಿನ ದಿನಗಳಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ರಾಜ್ಯ ರಾಜಕೀಯಕ್ಕೆ ಬೃಹತ್ ತಿರುವು ನೀಡಬಹುದೆಂಬ ನಿರೀಕ್ಷೆಯಿದೆ.

Share This Article
Leave a Comment