NEET ಪ್ರತಿಭಟನೆ ವಿಚಾರದಲ್ಲಿ ಗದ್ದಲ: ಮಧ್ಯಾಹ್ನ 2ರವರೆಗೆ ರಾಜ್ಯಸಭೆ ಮುಂದೂಡಿಕೆ

2 Min Read
2 Min Read

ನವದೆಹಲಿ: NEET ವಿಚಾರದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರು ಕೈಗೊಂಡಿದ್ದಾರೆ ಎನ್ನಲಾದ ಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರು ಗದ್ದಲ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

ಮಧ್ಯಾಹ್ನ 12 ಗಂಟೆಗೆ ಮೊದಲ ಬಾರಿಗೆ ಕಲಾಪ ಮುಂದೂಡಿಕೆಯ ಬಳಿಕ ಸದನ ಮತ್ತೆ ಸೇರಿದಾಗ ರಾಜ್ಯಸಭಾ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಶ್ನೋತ್ತರ ಅವಧಿಯನ್ನು ಕೈಗೆತ್ತಿಕೊಂಡರು.

ರಾಷ್ಟ್ರೀಯ ವಿದ್ಯುತ್ ನೀತಿ 2026 ಅಂತಿಮ ಹಂತದಲ್ಲಿ

ಪ್ರಶ್ನೋತ್ತರ ಅವಧಿಯಲ್ಲಿ ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಅವರು ‘ರಾಷ್ಟ್ರೀಯ ವಿದ್ಯುತ್ ನೀತಿ–2026’ ಕರಡು ಅಂತಿಮಗೊಳಿಸುವ ಹಂತದಲ್ಲಿದ್ದು, ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಸ್ಮಾರ್ಟ್ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು. ವಿದ್ಯುತ್ ಬೇಡಿಕೆ ಮತ್ತು ಪೂರೈಕೆ ನಿರ್ವಹಣೆಗೆ ಸೂಕ್ತ ಗಮನ ನೀಡಲಾಗಿದ್ದು, ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಖಚಿತಪಡಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ವಿರೋಧ ಪಕ್ಷದ ಸದಸ್ಯರ ಘೋಷಣೆ ಮತ್ತು ಗದ್ದಲದ ನಡುವೆಯೇ ಮನೋಹರ್ ಲಾಲ್ ಅವರು ಪೂರಕ ಪ್ರಶ್ನೆಗಳಿಗೆ ಉತ್ತರಿಸಿದರು. ಗದ್ದಲ ಮುಂದುವರಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

ಶೂನ್ಯ ವೇಳೆಯಲ್ಲಿ ಹಲವು ಪ್ರಮುಖ ವಿಷಯಗಳ ಪ್ರಸ್ತಾಪ

ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ಸದನ ಆರಂಭವಾದಾಗ ವಿವಿಧ ಸಚಿವಾಲಯಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಚಿವರು ಸದನದ ಮೇಜಿನ ಮೇಲೆ ಮಂಡಿಸಿದರು. ಹಣಕಾಸು, ವಸತಿ ಮತ್ತು ನಗರ ವ್ಯವಹಾರಗಳು, ರೈಲ್ವೆ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗಳ ವರದಿಗಳನ್ನೂ ಮಂಡಿಸಲಾಯಿತು.

ಬಳಿಕ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಶೂನ್ಯ ವೇಳೆಯನ್ನು ಕೈಗೆತ್ತಿಕೊಂಡರು.

ಬಿಜೆಪಿಯ ತರುಣ್ ಚುಗ್ ಅವರು ಪಂಜಾಬ್‌ನ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹಾಗೂ ಹೆಚ್ಚುತ್ತಿರುವ ಮಾದಕವಸ್ತು ದುರುಪಯೋಗದ ಕುರಿತು ವಿಷಯ ಪ್ರಸ್ತಾಪಿಸಿದರು. ರಾಜ್ಯದ ಯುವಜನರು ಮಾದಕವಸ್ತು ವ್ಯಸನಕ್ಕೆ ಹೆಚ್ಚು ಒಳಗಾಗುತ್ತಿದ್ದು, ಇದರಿಂದ ಅಪರಾಧ ಚಟುವಟಿಕೆಗಳೂ ಹೆಚ್ಚುತ್ತಿವೆ ಎಂದು ಅವರು ಹೇಳಿದರು.

ಮಾದಕವಸ್ತುಗಳ ಅತಿಯಾದ ಸೇವೆಯಿಂದ ಒಂದು ವರ್ಷದಲ್ಲಿ 89 ಮಂದಿ ಮೃತಪಟ್ಟಿದ್ದಾರೆ ಎಂದು ಚುಗ್ ತಿಳಿಸಿದರು. ಈ ಸಮಸ್ಯೆಯನ್ನು ತಡೆಗಟ್ಟಲು ಪಂಜಾಬ್ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಬಿಜೆಪಿಯ ಬಾಬುಭಾಯಿ ಜೇಸಂಗಭಾಯಿ ದೇಸಾಯಿ ಅವರು ಗುಜರಾತ್‌ನಲ್ಲಿ ಕಾಣಿಸಿಕೊಂಡಿರುವ ಚಂಡಿಪುರ ವೈರಸ್ ಕಾಯಿಲೆಯ ಕುರಿತು ಪ್ರಸ್ತಾಪಿಸಿ, ರೋಗ ನಿಯಂತ್ರಣಕ್ಕಾಗಿ ರಾಷ್ಟ್ರಮಟ್ಟದ ಜಾಗೃತಿ ಅಭಿಯಾನ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಸಿಪಿಐಯ ಸಂತೋಷ್ ಕುಮಾರ್, ಬಿಜೆಪಿಯ ಬಿಸ್ವಜಿತ್ ಸಿನ್ಹಾ ಹಾಗೂ ಡಾ. ಕೆ. ಲಕ್ಷ್ಮಣ್ ಅವರು ಕೂಡ ತುರ್ತು ಸಾರ್ವಜನಿಕ ಮಹತ್ವದ ವಿವಿಧ ವಿಷಯಗಳನ್ನು ಸದನದ ಗಮನಕ್ಕೆ ತಂದರು.

ಆದರೆ ವಿರೋಧ ಪಕ್ಷದ ಸದಸ್ಯರ ನಿರಂತರ ಘೋಷಣೆ ಮತ್ತು ಗದ್ದಲದಿಂದ ಸದನದ ಕಲಾಪ ಸುಗಮವಾಗಿ ನಡೆಯದ ಹಿನ್ನೆಲೆಯಲ್ಲಿ ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

Share This Article