ಕಾಮಿಡಿ-ರೊಮ್ಯಾಂಟಿಕ್ ಕಥೆಯಲ್ಲಿ ಹೊಸ ಅವತಾರದಲ್ಲಿ ನವೀನ್ ಸಜ್ಜು; ಆಗಸ್ಟ್‌ನಿಂದ ಚಿತ್ರೀಕರಣ ಆರಂಭಭ

1 Min Read
1 Min Read

ಬೆಂಗಳೂರು: ‘ಲೋ ನವೀನಾ’ ಚಿತ್ರದ ಯಶಸ್ಸಿನ ಬೆನ್ನಲ್ಲೇ ಗಾಯಕ-ನಟ ನವೀನ್ ಸಜ್ಜು ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ‘ಸೀಜರ್’, ‘ಹಂಟರ್’ ಖ್ಯಾತಿಯ ನಿರ್ದೇಶಕ ವಿನಯ್ ಕೃಷ್ಣ ನಿರ್ದೇಶಿಸಲಿದ್ದು, ಇಬ್ಬರ ಮೊದಲ ಕಾಂಬಿನೇಷನ್ ಇದಾಗಿದೆ.

ಇತ್ತೀಚೆಗೆ ತಮಿಳಿನ ‘ವರ್ಕರ್’ ಚಿತ್ರದ ಮೂಲಕ ನಿರ್ದೇಶಕರಾಗಿ ಕಾಲಿಟ್ಟಿದ್ದ ವಿನಯ್ ಕೃಷ್ಣ ಅವರಿಗೆ ಇದು ಮೂರನೇ ಕನ್ನಡ ಚಿತ್ರವಾಗಿದೆ. ಚಿತ್ರವು ಆಗಸ್ಟ್‌ನಲ್ಲಿ ಸೆಟ್ಟೇರಲಿದೆ.

‘ಲೋ ನವೀನಾ’ ನವೀನ್ ಸಜ್ಜು ಅವರ ನಾಯಕ ನಟನಾಗಿ ಮೊದಲ ಸಿನಿಮಾ ಆಗಿದ್ದು, ಚಿತ್ರವು ಚಿತ್ರಮಂದಿರಗಳಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿತ್ತು. ಪ್ರಸ್ತುತ ಈ ಸಿನಿಮಾ ಪ್ರೈಮ್ ವಿಡಿಯೊನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಹೊಸ ಚಿತ್ರದ ಬಗ್ಗೆ ಮಾತನಾಡಿರುವ ನವೀನ್ ಸಜ್ಜು, ಇದು ಕಾಮಿಡಿ ಮತ್ತು ರೊಮ್ಯಾನ್ಸ್ ಮಿಶ್ರಿತ ನೈಜ ಕಥಾಹಂದರ ಹೊಂದಿರುವ ಕಮರ್ಷಿಯಲ್ ಸಿನಿಮಾ ಎಂದು ಹೇಳಿದ್ದಾರೆ.

“ನಟನೆಗೆ ಈಗ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ಈ ಚಿತ್ರದಲ್ಲಿ ನನಗೆ ಸಿಕ್ಕಿರುವ ಪಾತ್ರ ಇದುವರೆಗೆ ಮಾಡಿರುವ ಎಲ್ಲ ಪಾತ್ರಗಳಿಗಿಂತ ಭಿನ್ನವಾಗಿದೆ. ಚಿತ್ರೀಕರಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ.

ಚಿತ್ರಕ್ಕೆ ಸದ್ಯ ‘ಶುಭ’ ಎಂಬ ಶೀರ್ಷಿಕೆಯನ್ನು ಪರಿಗಣಿಸಲಾಗಿದ್ದು, ‘ಇವನು ನಿಮ್ಮೆಲ್ಲ ಒಬ್ಬ’ ಎಂಬ ಟ್ಯಾಗ್‌ಲೈನ್ ಇಡುವ ಬಗ್ಗೆ ಚಿತ್ರತಂಡ ಚಿಂತನೆ ನಡೆಸಿದೆ. ಈ ಶೀರ್ಷಿಕೆ ಚಿತ್ರದ ಕಥೆ ಹಾಗೂ ನಾಯಕನ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ ಎಂದು ನವೀನ್ ತಿಳಿಸಿದ್ದಾರೆ.

ಶ್ರೀ ರಂಗ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಉದಯ್ ಕುಮಾರ್ ಎಸ್.ಟಿ. ಮತ್ತು ಅರುಣ್ ಕುಮಾರ್ ಸಿ. ಚಿತ್ರವನ್ನು ನಿರ್ಮಿಸುತ್ತಿದ್ದು, ಸಾಧು ಕೋಕಿಲ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಚಿತ್ರೀಕರಣ ಆರಂಭಕ್ಕೂ ಮುನ್ನ ನವೀನ್ ಸಜ್ಜು ಅವರು ಅಮೆರಿಕದಲ್ಲಿ ನಡೆಯುವ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿ ಬಳಿಕ ಭಾರತಕ್ಕೆ ಮರಳಿ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಚಿತ್ರದಲ್ಲಿ ತಾವು ನಟನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದು, ಗಾಯಕನಾಗಿ ಯಾವುದೇ ಹಾಡು ಹಾಡುವುದಿಲ್ಲ ಎಂದು ನವೀನ್ ಸ್ಪಷ್ಟಪಡಿಸಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಮಾಡಲಿದ್ದಾರೆ.

Share This Article