ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ದೇಶದ ರೈಲ್ವೆ ಮತ್ತು ರಸ್ತೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಒಟ್ಟು ₹13,041 ಕೋಟಿ ವೆಚ್ಚದ 5 ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು ಯೋಜನೆಗಳ ವಿವರಗಳನ್ನು ಹಂಚಿಕೊಂಡರು.
ಅನುಮೋದನೆ ಪಡೆದ ಐದು ಯೋಜನೆಗಳಲ್ಲಿ ನಾಲ್ಕು ರೈಲ್ವೆ ಮಲ್ಟಿಟ್ರ್ಯಾಕಿಂಗ್ ಯೋಜನೆಗಳು ಹಾಗೂ ಒಂದು ಹೆದ್ದಾರಿ ಯೋಜನೆ ಸೇರಿವೆ. ರೈಲ್ವೆ ಯೋಜನೆಗಳು ಪಶ್ಚಿಮ ಬಂಗಾಳ, ಒಡಿಶಾ, ತಮಿಳುನಾಡು ಮತ್ತು ಆಂಧ್ರಪ್ರದೇಶದ 8 ಜಿಲ್ಲೆಗಳನ್ನು ಒಳಗೊಂಡಿರಲಿವೆ.
410 ಕಿ.ಮೀ ರೈಲು ಜಾಲಕ್ಕೆ ಸೇರ್ಪಡೆ
ನಾಲ್ಕು ರೈಲ್ವೆ ಯೋಜನೆಗಳಡಿ ಖರಗ್ಪುರ–ಭದ್ರಕ್ 4ನೇ ಮಾರ್ಗ, ಭದ್ರಕ್–ಹರಿದಾಸ್ಪುರ 4ನೇ ಮಾರ್ಗ, ಗುಮ್ಮಿಡಿಪುಂಡಿ–ಗುಡೂರು 3ನೇ ಮತ್ತು 4ನೇ ಮಾರ್ಗ ಹಾಗೂ ಕಟಕ್–ಪಾರಾದೀಪ್ 3ನೇ ಮತ್ತು 4ನೇ ಮಾರ್ಗ ನಿರ್ಮಾಣವಾಗಲಿದೆ.
ಈ ಯೋಜನೆಗಳಿಂದ ಭಾರತೀಯ ರೈಲ್ವೆ ಜಾಲಕ್ಕೆ ಸುಮಾರು 410 ಕಿ.ಮೀ ಹೆಚ್ಚುವರಿ ರೈಲು ಮಾರ್ಗ ಸೇರ್ಪಡೆಯಾಗಲಿದೆ. ಒಟ್ಟು ₹9,450 ಕೋಟಿ ಅಂದಾಜು ವೆಚ್ಚದ ಈ ಯೋಜನೆಗಳನ್ನು 2030–31ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಬಿಹಾರದಲ್ಲಿ 82.57 ಕಿ.ಮೀ ಹೆದ್ದಾರಿ ಮೇಲ್ದರ್ಜೆಗೆ
ಇದರೊಂದಿಗೆ ಬಿಹಾರದಲ್ಲಿನ NH-22ರ ಮುಜಫರ್ಪುರ–ಸೀತಾಮಢಿ–ಸೋನ್ಬರ್ಸಾ ವಿಭಾಗವನ್ನು ನಾಲ್ಕು ಪಥದ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವ ಯೋಜನೆಗೂ ಸಂಪುಟ ಅನುಮೋದನೆ ನೀಡಿದೆ.
82.57 ಕಿ.ಮೀ ಉದ್ದದ ಈ ಯೋಜನೆಯನ್ನು ಹೈಬ್ರಿಡ್ ಆನ್ಯುಟಿ ಮಾದರಿ (HAM) ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದಕ್ಕೆ ಒಟ್ಟು ₹3,590 ಕೋಟಿಗೂ ಅಧಿಕ ಬಂಡವಾಳ ವೆಚ್ಚವಾಗಲಿದೆ ಎಂದು ಸಚಿವರು ತಿಳಿಸಿದರು.
ರೈಲ್ವೆ ಮತ್ತು ರಸ್ತೆ ಸಂಪರ್ಕ ವ್ಯವಸ್ಥೆಯನ್ನು ವಿಸ್ತರಿಸುವ ಈ ಯೋಜನೆಗಳು ಸರಕು ಸಾಗಣೆ ಹಾಗೂ ಪ್ರಯಾಣಿಕರ ಸಂಚಾರಕ್ಕೆ ವೇಗ ನೀಡುವುದರ ಜೊತೆಗೆ, ಸಂಬಂಧಿತ ರಾಜ್ಯಗಳ ಮೂಲಸೌಕರ್ಯ ಅಭಿವೃದ್ಧಿಗೂ ಮತ್ತಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ.

