ಭಾರತ-ರೊಮೇನಿಯಾ ಆರ್ಥಿಕ ಸಹಕಾರಕ್ಕೆ ಹೊಸ ವೇಗ: ಹೂಡಿಕೆ ವಿಸ್ತರಣೆಗೆ ರಾಷ್ಟ್ರಪತಿ ಮುರ್ಮು ಕರೆ

2 Min Read
2 Min Read

ಬುಖಾರೆಸ್ಟ್: ಭಾರತ ಮತ್ತು ರೊಮೇನಿಯಾ ನಡುವಿನ ಆರ್ಥಿಕ ಹಾಗೂ ಹೂಡಿಕೆ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ. ಉಭಯ ದೇಶಗಳ ನಡುವೆ ವಾಣಿಜ್ಯ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಇನ್ನೂ ಅಪಾರ ಅವಕಾಶಗಳು ಅಡಗಿವೆ ಎಂದು ಅವರು ಹೇಳಿದ್ದಾರೆ.

ರೊಮೇನಿಯಾದ ರಾಜಧಾನಿ ಬುಖಾರೆಸ್ಟ್‌ನಲ್ಲಿ ನಡೆದ ಭಾರತ–ರೊಮೇನಿಯಾ ಬ್ಯುಸಿನೆಸ್ ಫೋರಂ ಅನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ, ರೊಮೇನಿಯಾದ ಕಾರ್ಯತಂತ್ರದ ಭೌಗೋಳಿಕ ಸ್ಥಾನ, ನುರಿತ ಮಾನವ ಸಂಪನ್ಮೂಲ ಹಾಗೂ ಯುರೋಪಿಯನ್ ಒಕ್ಕೂಟದೊಂದಿಗೆ ಹೊಂದಿರುವ ಬಲವಾದ ಸಂಪರ್ಕ ಭಾರತಕ್ಕೆ ಪ್ರಮುಖ ಪಾಲುದಾರನನ್ನಾಗಿ ಮಾಡಿದೆ ಎಂದು ಹೇಳಿದರು.

ಪ್ರಸ್ತಾವಿತ ಭಾರತ–ಯುರೋಪಿಯನ್ ಒಕ್ಕೂಟ (EU) ಮುಕ್ತ ವ್ಯಾಪಾರ ಒಪ್ಪಂದ ವ್ಯಾಪಾರ, ಹೂಡಿಕೆ ಹಾಗೂ ಸ್ಥಿರ ಪೂರೈಕೆ ಸರಪಳಿಯನ್ನು ಬಲಪಡಿಸುವ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಒಪ್ಪಂದವನ್ನು ಶೀಘ್ರ ಜಾರಿಗೆ ತರುವುದರಿಂದ ಉದ್ಯಮಗಳು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (MSMEs) ಹಾಗೂ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಭಾರತ ಮತ್ತು ರೊಮೇನಿಯಾ ರಕ್ಷಣಾ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಗ್ರೀನ್ ಹೈಡ್ರೋಜನ್, ಅಣುಶಕ್ತಿ, ಮಾಹಿತಿ ತಂತ್ರಜ್ಞಾನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸೈಬರ್ ಭದ್ರತೆ, ಸಾರಿಗೆ, ಲಾಜಿಸ್ಟಿಕ್ಸ್, ಔಷಧೋದ್ಯಮ, ಆರೋಗ್ಯ, ಕೃಷಿ ಹಾಗೂ ಆಹಾರ ಸಂಸ್ಕರಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಬಹುದು ಎಂದು ರಾಷ್ಟ್ರಪತಿ ತಿಳಿಸಿದರು.

ವೇಗವಾಗಿ ಬೆಳೆಯುತ್ತಿರುವ ಭಾರತದ ಆರ್ಥಿಕತೆ, ಹೂಡಿಕೆದಾರ ಸ್ನೇಹಿ ಸುಧಾರಣೆಗಳು ಹಾಗೂ ‘ವಿಕಸಿತ ಭಾರತ-2047’ ದೃಷ್ಟಿಕೋನವು ಜಾಗತಿಕ ಹೂಡಿಕೆದಾರರಿಗೆ ವ್ಯಾಪಕ ಅವಕಾಶಗಳನ್ನು ಒದಗಿಸುತ್ತಿದೆ ಎಂದು ಅವರು ಹೇಳಿದರು.

ಜಂಟಿ ಆರ್ಥಿಕ ಆಯೋಗ, ಇಂಧನ ಕುರಿತ ಜಂಟಿ ಕಾರ್ಯಪಡೆ ಹಾಗೂ ಜಂಟಿ ರಕ್ಷಣಾ ಸಹಕಾರ ಸಮಿತಿ ಮೊದಲಾದ ಸಾಂಸ್ಥಿಕ ವ್ಯವಸ್ಥೆಗಳು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಮುರ್ಮು ಹೇಳಿದರು.

ಉದ್ಯಮಿಗಳ ನಡುವಿನ ಈ ಸಂವಾದಗಳು ಹೊಸ ಹೂಡಿಕೆಗಳು, ಬಲಿಷ್ಠ ಪಾಲುದಾರಿಕೆಗಳು ಹಾಗೂ ದೀರ್ಘಕಾಲೀನ ವಾಣಿಜ್ಯ ಸಂಬಂಧಗಳಿಗೆ ದಾರಿ ಮಾಡಿಕೊಟ್ಟು, ಭಾರತ–ರೊಮೇನಿಯಾ ಆರ್ಥಿಕ ಸಹಕಾರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬ ವಿಶ್ವಾಸವನ್ನು ರಾಷ್ಟ್ರಪತಿ ವ್ಯಕ್ತಪಡಿಸಿದರು.

Share This Article