ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಯ ವೇಳೆ ಗುಪ್ತಚರ ದಳ (IB) ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ಮಾಜಿ ಆಮ್ ಆದ್ಮಿ ಪಕ್ಷ (AAP) ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ಐವರನ್ನು ದೆಹಲಿಯ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರವೀಣ್ ಸಿಂಗ್ ಅವರ ನ್ಯಾಯಪೀಠವು ಒಟ್ಟು 11 ಆರೋಪಿಗಳ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ್ದು, ತಾಹಿರ್ ಹುಸೇನ್ ಸೇರಿ ಐವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದೆ.
ನ್ಯಾಯಾಲಯವು ತಾಹಿರ್ ಹುಸೇನ್ ಅವರನ್ನು ಧರ್ಮಾಧಾರಿತ ದ್ವೇಷ ಪ್ರಚೋದನೆ, ಗಲಭೆ, ಹಲ್ಲೆ, ಕ್ರಿಮಿನಲ್ ಬಲಪ್ರಯೋಗ ಹಾಗೂ ಕೊಲೆ ಆರೋಪಗಳಲ್ಲಿ ದೋಷಿಯೆಂದು ಘೋಷಿಸಿದೆ.
ಈ ಪ್ರಕರಣವು ಅಂಕಿತ್ ಶರ್ಮಾ ಅವರ ತಂದೆ ರವೀಂದರ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ದಯಾಲ್ಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದೆ.
ಪ್ರಕರಣದಲ್ಲಿ ತಾಹಿರ್ ಹುಸೇನ್ ಹೆಸರು ಬೆಳಕಿಗೆ ಬಂದ ನಂತರ ಆಮ್ ಆದ್ಮಿ ಪಕ್ಷವು ಅವರನ್ನು ಅಮಾನತುಗೊಳಿಸಿತ್ತು.
2020ರ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ 53 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಅಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.
ಈ ಪ್ರಕರಣದಲ್ಲಿ ತಾಹಿರ್ ಹುಸೇನ್ ಸೇರಿದಂತೆ 11 ಆರೋಪಿಗಳ ವಿರುದ್ಧ 2023ರ ಮಾರ್ಚ್ನಲ್ಲಿ ದೆಹಲಿ ನ್ಯಾಯಾಲಯ ಆರೋಪಪಟ್ಟಿಯನ್ನು (Charges) ರೂಪಿಸಿತ್ತು. ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಂಡು ಐವರನ್ನು ದೋಷಿಗಳೆಂದು ಘೋಷಿಸಲಾಗಿದೆ.


