ಡೆಹ್ರಾಡೂನ್: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಹಾಗೂ ಉಲ್ಲಾಸ್ (ULLAS – Understanding of Lifelong Learning for All in Society) – ನ್ಯೂ ಇಂಡಿಯಾ ಲಿಟರಸಿ ಪ್ರೋಗ್ರಾಂ ಅಡಿಯಲ್ಲಿ ನಿಗದಿಪಡಿಸಿದ ವಯಸ್ಕರ ಸಾಕ್ಷರತಾ ಮಾನದಂಡಗಳನ್ನು ಯಶಸ್ವಿಯಾಗಿ ಪೂರೈಸಿರುವ ಉತ್ತರಾಖಂಡ ದೇಶದ ಆರನೇ ಸಂಪೂರ್ಣ ಸಾಕ್ಷರ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಕುರಿತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿಗದಿಪಡಿಸಿದ ಮಾನದಂಡಗಳನ್ನು ರಾಜ್ಯ ಪೂರೈಸಿದ ಹಿನ್ನೆಲೆಯಲ್ಲಿ, 2026ರ ಜುಲೈ 8ರಂದು ರಾಜ್ಯಪಾಲರು ಅಧಿಕೃತ ಘೋಷಣೆಗೆ ಅನುಮೋದನೆ ನೀಡಿದ್ದಾರೆ.
ಆರನೇ ಸಂಪೂರ್ಣ ಸಾಕ್ಷರ ರಾಜ್ಯ
ಈ ಸಾಧನೆಯೊಂದಿಗೆ ಉತ್ತರಾಖಂಡವು ಮಿಜೋರಾಂ, ಗೋವಾ, ತ್ರಿಪುರಾ, ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳ ಸಾಲಿಗೆ ಸೇರ್ಪಡೆಯಾಗಿದೆ. ಇದು ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.
ಸರ್ಕಾರ ಮತ್ತು ಜನರ ಜಂಟಿ ಪ್ರಯತ್ನಕ್ಕೆ ಫಲ
ಈ ಐತಿಹಾಸಿಕ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಇದು ಸರ್ಕಾರದ ನಿರಂತರ ಪ್ರಯತ್ನ ಹಾಗೂ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದ ಫಲವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಡಿಜಿಟಲ್ ಸಾಕ್ಷರತೆ, ಹಣಕಾಸು ಸಾಕ್ಷರತೆ, ನಿರಂತರ ಶಿಕ್ಷಣ ಹಾಗೂ ಜೀವನ ಕೌಶಲ್ಯಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದರು.
ಈ ಸಾಧನೆಗಾಗಿ ಉತ್ತರಾಖಂಡದ ಜನತೆಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿ, ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ಇನ್ನಷ್ಟು ಪ್ರಗತಿ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.


