ನವದೆಹಲಿ: ಜಾರ್ಖಂಡ್ನ ಮಹಿಳಾ ರೈತರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯ ಹೊಸ ಅವಕಾಶ ದೊರೆತಿದ್ದು, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ನೆರವಿನಿಂದ ಎರಡು ಮೆಟ್ರಿಕ್ ಟನ್ ಅಮ್ರಪಾಲಿ ಮಾವಿನ ಹಣ್ಣುಗಳನ್ನು ದುಬೈಗೆ ವಾಣಿಜ್ಯಿಕವಾಗಿ ರಫ್ತು ಮಾಡಲಾಗಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿ ಪ್ರಕಾರ, ಈ ಮಾವಿನ ಹಣ್ಣುಗಳನ್ನು ಬಿರ್ಸಾ ಹರಿತ್ ಗ್ರಾಮ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಜಾರ್ಖಂಡ್ನ ಗುಮ್ಲಾ ಮತ್ತು ದೇವಘರ್ ಜಿಲ್ಲೆಗಳ ಮೂರು ಮಹಿಳಾ ನೇತೃತ್ವದ ರೈತ ಉತ್ಪಾದಕರ ಕಂಪನಿಗಳಿಂದ (FPCs) ಸಂಗ್ರಹಿಸಲಾಗಿದೆ.
ಈ ರಫ್ತು ಯೋಜನೆಯಿಂದ ರೈತರಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುವ ಬೆಲೆಗಿಂತ ಸುಮಾರು 180 ಶೇಕಡಾ ಹೆಚ್ಚು ಆದಾಯ ದೊರೆತಿದ್ದು, ಮಹಿಳಾ ಹಾಗೂ ಆದಿವಾಸಿ ರೈತರ ಆರ್ಥಿಕ ಸಬಲೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ.
ದುಬೈಗೆ ನಡೆದ ಈ ವಾಣಿಜ್ಯಿಕ ರಫ್ತು, ಆದಿವಾಸಿ ಮತ್ತು ಮಹಿಳಾ ರೈತರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಸಂಪರ್ಕಿಸುವ ಪ್ರಮುಖ ಮೈಲಿಗಲ್ಲು ಎಂದು ಸಚಿವಾಲಯ ತಿಳಿಸಿದೆ.
ರಫ್ತಿಗೆ ಸಜ್ಜುಗೊಂಡ ರೈತ ಉತ್ಪಾದಕರ ಸಂಘಗಳನ್ನು ರೂಪಿಸುವುದು, ಅವರಿಗೆ ತರಬೇತಿ, ಗುಣಮಟ್ಟ ಸುಧಾರಣೆ ಹಾಗೂ ಜಾಗತಿಕ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ಮೂಲಕ ಜಾರ್ಖಂಡ್ನ ತೋಟಗಾರಿಕಾ ಉತ್ಪನ್ನಗಳ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.


