‘ಪ್ಯಾಟ್ರಿಯಟ್’ನಲ್ಲಿ ಅತಿಯಾದ ಸ್ಟಾರ್ಡಮ್ ಭಾರವಾಯಿತು: ಪೃಥ್ವಿರಾಜ್ ಸುಕುಮಾರನ್
ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ನಿರ್ದೇಶಕ ಮಹೇಶ್ ನಾರಾಯಣನ್ ಅವರ ಬಹುನಿರೀಕ್ಷಿತ ‘ಪ್ಯಾಟ್ರಿಯಟ್’ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮಮ್ಮೂಟ್ಟಿ, ಮೋಹನ್ಲಾಲ್, ಫಹಾದ್ ಫಾಸಿಲ್, ಕುಂಚಾಕೋ ಬೋಬನ್ ಹಾಗೂ ಜರಿನ್ ಶಿಹಾಬ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ನಟಿಸಿರುವ ಈ ಚಿತ್ರ ಉತ್ತಮ ಅನುಭವ ನೀಡಿದರೂ, ಅದು ಪರಿಪೂರ್ಣ ಸಿನಿಮಾ ಅಲ್ಲ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಪೃಥ್ವಿರಾಜ್, ಚಿತ್ರದ ಚಿತ್ರಕಥೆಯನ್ನು ನಿರ್ಮಾಣಕ್ಕೂ ಮುನ್ನವೇ ಓದಿದ್ದಾಗಿ ತಿಳಿಸಿದರು.
“ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ವಿಷಯವಾಗಿರಬಹುದು. ಆದರೆ ‘ಪ್ಯಾಟ್ರಿಯಟ್’ ಚಿತ್ರದ ಕಥೆಯನ್ನು ಅದು ನಿರ್ಮಾಣವಾಗುವುದಕ್ಕೂ ಮುನ್ನವೇ ಓದಿದ್ದೆ. ಮಹೇಶ್ ನಾರಾಯಣನ್ ಸ್ವತಃ ಕಥೆಯನ್ನು ವಿವರಿಸಿದ್ದರು. ಮೊದಲ ಬಾರಿಗೆ ಕೇಳಿದ ಕ್ಷಣದಿಂದಲೇ ಕಥೆ ನನ್ನನ್ನು ಸೆಳೆದಿತ್ತು. ಅದೊಂದು ಅದ್ಭುತ ಬರಹ ಎಂದು ನನಗೆ ಅನಿಸಿತ್ತು,” ಎಂದು ಹೇಳಿದರು.
ಆದರೆ ಚಿತ್ರವನ್ನು ನೋಡಿದ ಬಳಿಕ ಕೆಲವು ಅಂಶಗಳು ಇನ್ನಷ್ಟು ಉತ್ತಮವಾಗಿರಬಹುದಿತ್ತು ಎಂಬ ಭಾವನೆ ಮೂಡಿದೆ ಎಂದು ಅವರು ಹೇಳಿದರು.
“ಚಿತ್ರಕಥೆಯಿಂದ ಸಿನಿಮಾ ರೂಪುಗೊಳ್ಳುವ ಹಾದಿಯಲ್ಲಿ ಕೆಲವು ಬದಲಾವಣೆಗಳು ಅಥವಾ ಇನ್ನಷ್ಟು ಉತ್ತಮ ನಿರ್ವಹಣೆ ಸಾಧ್ಯವಾಗುತ್ತಿತ್ತು ಎಂದು ನನಗೆ ಅನಿಸಿತು,” ಎಂದು ಅಭಿಪ್ರಾಯಪಟ್ಟರು.
ಚಿತ್ರದ ಬಗ್ಗೆ ಮಾತನಾಡುವ ವೇಳೆ ಪೃಥ್ವಿರಾಜ್ ಒಂದು ಕುತೂಹಲಕಾರಿ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
“ಹಿಂದಿರುಗಿ ನೋಡಿದಾಗ, ಇಷ್ಟೊಂದು ದೊಡ್ಡ ದೊಡ್ಡ ಸ್ಟಾರ್ಗಳ ಉಪಸ್ಥಿತಿಯ ಭಾರ ಇಲ್ಲದಿದ್ದರೆ ‘ಪ್ಯಾಟ್ರಿಯಟ್’ ಇನ್ನಷ್ಟು ಪರಿಣಾಮಕಾರಿಯಾಗಿರಬಹುದಿತ್ತು ಎನ್ನಿಸುತ್ತದೆ,” ಎಂದು ಹೇಳಿದರು.
ಆದರೆ ಈ ಮಾತು ಮಮ್ಮೂಟ್ಟಿ ಮತ್ತು ಮೋಹನ್ಲಾಲ್ ಅವರ ಜೋಡಿಯನ್ನು ಟೀಕಿಸುವ ಉದ್ದೇಶದಿಂದ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳನ್ನು ದೊಡ್ಡ ತಾರೆಯರು ನಿರ್ವಹಿಸಿದ್ದಾರೆ. ಕೆಲವೊಮ್ಮೆ ಆ ಸ್ಟಾರ್ಡಮ್ ಕಥೆಯ ಮೇಲೆ ಹೆಚ್ಚುವರಿ ಒತ್ತಡವನ್ನು ತರುತ್ತದೆ. ಆದರೆ ಮಹೇಶ್ ನಾರಾಯಣನ್ ಕೆಲವು ದೃಶ್ಯಗಳನ್ನು ಅತ್ಯಂತ ಅದ್ಭುತವಾಗಿ ನಿರ್ವಹಿಸಿದ್ದಾರೆ. ಆ ಕ್ಷಣಗಳು ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದ ಸಿನಿಮಾವಾಗಿ ರೂಪಿಸಿವೆ,” ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿತ್ರದ ಕೆಲವು ಅಂಶಗಳು ತಮ್ಮ ನಿರೀಕ್ಷೆ ತಲುಪದಿದ್ದರೂ, ಒಟ್ಟಾರೆ ಸಿನಿಮಾ ತಮಗೆ ಇಷ್ಟವಾಯಿತು ಎಂದು ಪೃಥ್ವಿರಾಜ್ ಹೇಳಿದರು.
ಪೃಥ್ವಿರಾಜ್ ಅವರು ‘ಲುಸಿಫರ್’ ಹಾಗೂ ಅದರ ಮುಂದುವರಿದ ಭಾಗ ‘ಎಲ್2: ಎಂಪುರಾನ್’ ಸೇರಿದಂತೆ ಭಾರಿ ಬಜೆಟ್ ಚಿತ್ರಗಳನ್ನು ನಿರ್ದೇಶಿಸಿರುವ ಹಿನ್ನೆಲೆ, ‘ಪ್ಯಾಟ್ರಿಯಟ್’ ಬಿಡುಗಡೆಯಾದ ಬಳಿಕ ಕೆಲವು ಮಂದಿ ಮಹೇಶ್ ನಾರಾಯಣನ್ ಅವರನ್ನು ಪೃಥ್ವಿರಾಜ್ ಅವರ ನಿರ್ದೇಶನ ಶೈಲಿಯೊಂದಿಗೆ ಹೋಲಿಸಿ ಟೀಕಿಸಿದ್ದರು.


