ಭಾರತ-ಬಾಂಗ್ಲಾದೇಶ ಗಡಿ ಭದ್ರತೆಗೆ ಮತ್ತಷ್ಟು ಬಲ: ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರಗಳು

1 Min Read
1 Min Read

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶವು ಉಭಯ ದೇಶಗಳ ನಡುವಿನ ಗಡಿಯಲ್ಲಿ ಶಾಂತಿ, ನೆಮ್ಮದಿ ಮತ್ತು ಸ್ಥಿರತೆಯನ್ನು ಕಾಪಾಡುವ ತಮ್ಮ ಬದ್ಧತೆಯನ್ನು ಮತ್ತೊಮ್ಮೆ ಪುನರುಚ್ಚರಿಸಿವೆ.

ಜೂನ್ 8ರಿಂದ 11ರವರೆಗೆ ನವದೆಹಲಿಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮುಖ್ಯ ಕಚೇರಿಯಲ್ಲಿ ನಡೆದ 57ನೇ ಮಹಾನಿರ್ದೇಶಕರ ಮಟ್ಟದ ಗಡಿ ಸಮನ್ವಯ ಸಮ್ಮೇಳನದಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಸಮ್ಮೇಳನವು ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯ ಸಮಗ್ರ ಪರಿಶೀಲನೆ ನಡೆಸುವುದರ ಜೊತೆಗೆ, ಗಡಿ ಭದ್ರತೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಚರ್ಚಿಸಲು ಪ್ರಮುಖ ವೇದಿಕೆಯಾಗಿತ್ತು.

ಸಭೆಯಲ್ಲಿ ಉಭಯ ದೇಶಗಳು ಗಡಿಯಲ್ಲಿ ಸಂಯೋಜಿತ ಗಸ್ತು ಕಾರ್ಯಾಚರಣೆಗಳನ್ನು ಮತ್ತಷ್ಟು ಬಲಪಡಿಸಲು, ನಿಗಾವ್ಯವಸ್ಥೆಯನ್ನು ಹೆಚ್ಚಿಸಲು, ತಕ್ಷಣದ ಮಾಹಿತಿ ವಿನಿಮಯವನ್ನು ಸುಧಾರಿಸಲು ಹಾಗೂ ಗಡಿ ದಾಟುವ ಅಪರಾಧ ಜಾಲಗಳ ವಿರುದ್ಧ ಜಂಟಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲು ಒಪ್ಪಿಗೆ ಸೂಚಿಸಿವೆ.

ಭಾರತೀಯ ನಿಯೋಗವನ್ನು ಬಿಎಸ್‌ಎಫ್ ಮಹಾನಿರ್ದೇಶಕ ಪ್ರವೀಣ್ ಕುಮಾರ್ ನೇತೃತ್ವ ವಹಿಸಿದ್ದರೆ, ಬಾಂಗ್ಲಾದೇಶದ ನಿಯೋಗವನ್ನು ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (ಬಿಜಿಬಿ) ಮಹಾನಿರ್ದೇಶಕ ಮೇಜರ್ ಜನರಲ್ ಮೊಹಮ್ಮದ್ ಅಶ್ರಫುಜ್ಜಮಾನ್ ಸಿದ್ದಿಕಿ ಮುನ್ನಡೆಸಿದರು.

ಸಭೆಯ ಅಂತ್ಯದಲ್ಲಿ ಜಂಟಿ ಚರ್ಚಾ ದಾಖಲೆಗೆ (Joint Record of Discussions) ಸಹಿ ಹಾಕಲಾಯಿತು. ಈ ವೇಳೆ ಉಭಯ ನಿಯೋಗಗಳು ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ಪರಸ್ಪರ ಒಪ್ಪಂದಗಳು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ಪರಿಣಾಮಕಾರಿ ಗಡಿ ನಿರ್ವಹಣೆ ಮತ್ತು ಸ್ನೇಹಪರ ಸಂಬಂಧಗಳ ವೃದ್ಧಿಗೆ ನೆರವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದವು.

ಮುಂದಿನ ಮಹಾನಿರ್ದೇಶಕರ ಮಟ್ಟದ ಗಡಿ ಸಮನ್ವಯ ಸಮ್ಮೇಳನವನ್ನು 2026ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪರಸ್ಪರ ಅನುಕೂಲಕರ ದಿನಾಂಕದಲ್ಲಿ ಆಯೋಜಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

Share This Article