ಚಂಡೀಗಢ: ಬಡ ಮತ್ತು ಅಗತ್ಯವಿರುವ ಕುಟುಂಬಗಳಿಗೆ ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನ ತಲುಪಿಸುವ ವ್ಯವಸ್ಥೆಯಲ್ಲಿ ಹೊಸ ಹೆಜ್ಜೆಯಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (PMGKAY) ಅಡಿಯಲ್ಲಿ ನೇರ ಲಾಭ ವರ್ಗಾವಣೆಗೆ (DBT) ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC)–ಡಿಜಿಟಲ್ ರೂಪಾಯಿ (e₹) ವ್ಯವಸ್ಥೆಯನ್ನು ಚಂಡೀಗಢದಲ್ಲಿ ಇಂದು ಆರಂಭಿಸಲಾಗಿದೆ.
ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ನೆರವು ತಲುಪಿಸುವ ಮೂಲಕ ಮಧ್ಯವರ್ತಿಗಳ ಪಾತ್ರವನ್ನು ಕಡಿಮೆ ಮಾಡುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ.
ಗಣ್ಯರಿಂದ ಯೋಜನೆಗೆ ಚಾಲನೆ
ಪಂಜಾಬ್ ರಾಜ್ಯಪಾಲ ಹಾಗೂ ಚಂಡೀಗಢದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪ್ರಲ್ಹಾದ್ ಜೋಶಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ ಬಾಂಭಣಿಯಾ ಅವರು ಕಾರ್ಯಕ್ರಮದಲ್ಲಿ ಜಂಟಿಯಾಗಿ ಯೋಜನೆಗೆ ಚಾಲನೆ ನೀಡಿದರು.
ಆಹಾರ ಸಬ್ಸಿಡಿಗೆ CBDC ಆಧಾರಿತ DBT
ಈ ಯೋಜನೆ ಆರಂಭಿಸುವ ಮೂಲಕ ಆಹಾರ ಸಬ್ಸಿಡಿಗಾಗಿ CBDC ಆಧಾರಿತ DBT ವ್ಯವಸ್ಥೆಯನ್ನು ಸಂಪೂರ್ಣವಾಗಿ ಜಾರಿಗೆ ತಂದ ದೇಶದ ಮೊದಲ ಕೇಂದ್ರಾಡಳಿತ ಪ್ರದೇಶ ಎಂಬ ಹೆಗ್ಗಳಿಕೆಗೆ ಚಂಡೀಗಢ ಪಾತ್ರವಾಗಿದೆ.
ಯೋಜನೆಯಡಿ ಡಿಜಿಟಲ್ ರೂಪಾಯಿ ಮೂಲಕ ಫಲಾನುಭವಿಗಳಿಗೆ ನೇರವಾಗಿ ಪ್ರಯೋಜನ ತಲುಪಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಸರ್ಕಾರಿ ನೆರವು ಹೆಚ್ಚು ಪಾರದರ್ಶಕವಾಗಿ ಮತ್ತು ಪರಿಣಾಮಕಾರಿಯಾಗಿ ಫಲಾನುಭವಿಗಳನ್ನು ತಲುಪುವ ನಿರೀಕ್ಷೆಯಿದೆ.
ಇದೇ ಸಂದರ್ಭದಲ್ಲಿ ದಾದ್ರಾ ಮತ್ತು ನಗರ ಹವೇಲಿಯಲ್ಲಿಯೂ ಇದೇ ಯೋಜನೆಯನ್ನು ಚಂಡೀಗಢದಿಂದ ವರ್ಚುವಲ್ ಮೂಲಕ ಆರಂಭಿಸಲಾಯಿತು.


