ಹುಲಿಯೂರುದುರ್ಗ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಕುಣಿಗಲ್ ತಹಸೀಲ್ದಾರ್ ಯು. ರಶ್ಮಿ ಅವರಿಗೆ 25 ಸಾವಿರ ರೂ. ದಂಡ ಪಾವತಿ ಮಾಡುವಂತೆ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಆದೇಶಿಸಿದ್ದಾರೆ.
ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ನರಸೇಗೌಡ ಎಂಬುವವರು ಮಾಹಿತಿ ಹಕ್ಕು ಕಾಯ್ದೆಯಡಿ ಕಡತವೊಂದರ ಮಾಹಿತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿದಾರರಿಗೆ ಮಾಹಿತಿ ನೀಡುವಲ್ಲಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಅರ್ಜಿದಾರರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗ, ಅರ್ಜಿದಾರರಿಗೆ ನಿಗದಿತ ಸಮಯದಲ್ಲಿ ಮಾಹಿತಿ ನೀಡುವಲ್ಲಿ ವಿಳಂಬ ಹಾಗೂ ಆಯೋಗಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಕರ್ತವ್ಯ ಉಲ್ಲಂಘಿಸಿದ ಕಾರಣ ಯು.ರಶ್ಮಿಗೆ ದಂಡ ವಿಧಿಸಿದೆ. ತಹಸೀಲ್ದಾರ್ ಅವರ ನವೆಂಬರ್ ತಿಂಗಳ ವೇತನದಲ್ಲಿ 25 ಸಾವಿರ ರೂ. ದಂಡವನ್ನು ಆಯೋಗಕ್ಕೆ ಪಾವತಿಸುವಂತೆ ಹಾಗೂ ಶಿಸ್ತುಕ್ರಮಕ್ಕೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯ ಅವರಿಗೆ ಸೂಚಿಸಿದೆ.
ಹಾಗೆಯೇ ಅರ್ಜಿದಾರರಿಗೆ 5 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.


