ನವದೆಹಲಿ: ಮಾನವೀಯತೆ ಮತ್ತು ಕರಾವಳಿ ಮೀನುಗಾರರ ಜೀವನೋಪಾಯದ ಪರಿಗಣನೆಯೊಂದಿಗೆ ಭಾರತ ಮತ್ತು ಬಾಂಗ್ಲಾದೇಶ ಪರಸ್ಪರ ಸೆರೆಯಲ್ಲಿದ್ದ ಮೀನುಗಾರರನ್ನು ಬಿಡುಗಡೆ ಮಾಡುವ ಮಹತ್ವದ ಕ್ರಮ ಕೈಗೊಂಡಿವೆ. ಇಂದು ಭಾರತ 38 ಮಂದಿ ಬಾಂಗ್ಲಾದೇಶಿ ಮೀನುಗಾರರನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶ 47 ಮಂದಿ ಭಾರತೀಯ ಮೀನುಗಾರರನ್ನು ಅವರ ದೋಣಿಗಳ ಸಮೇತ ತವರಿಗೆ ಕಳುಹಿಸಿದೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ನೀಡಿದ್ದು, ಇತ್ತೀಚೆಗೆ ಸಮುದ್ರ ಗಡಿ ಉಲ್ಲಂಘನೆ ಆರೋಪದ ಮೇಲೆ ಎರಡೂ ದೇಶಗಳ ಅಧಿಕಾರಿಗಳು ಮೀನುಗಾರರನ್ನು ಬಂಧಿಸಿದ್ದ ಮಾಹಿತಿ ನೀಡಿದೆ.
ಈ ಪರಸ್ಪರ ಬಿಡುಗಡೆ, ಎರಡೂ ಸರ್ಕಾರಗಳು ಕರಾವಳಿ ಮೀನುಗಾರರ ಹಿತಾಸಕ್ತಿ, ಮಾನವೀಯತೆ ಮತ್ತು ಸ್ನೇಹಪೂರ್ಣ ಸಂಬಂಧಗಳಿಗೆ ಬದ್ಧವಾಗಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಸಚಿವಾಲಯ ಹೇಳಿದೆ.


