ಬೆಂಗಳೂರು, ನವೆಂಬರ್ 20:
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಪ್ರತಿಭೆ ಪ್ರದರ್ಶಿಸುತ್ತಿರುವ ಯುವಕರಿಗೆ ಸರ್ಕಾರವು ನೀಡಿರುವ ಮೀಸಲಾತಿ ಈಗ ಫಲ ನೀಡತೊಡಗಿದೆ. ರಾಜ್ಯದಲ್ಲಿ ಶೇ.3ರಷ್ಟು ಕ್ರೀಡಾ ಮೀಸಲಾತಿ ಅನ್ವಯ ಇದುವರೆಗೆ 180 ಯುವಕರು ಪೊಲೀಸ್ ಇಲಾಖೆ ಗೆ ವಿವಿಧ ಹುದ್ದೆಗಳಲ್ಲಿ ನೇಮಕಗೊಂಡಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.
ನಗರದ ಆಡುಗೋಡಿ ಸಿಎಆರ್ ಕವಾಯತು ಮೈದಾನದಲ್ಲಿ ಇಂದು ನಡೆದ “ಬೆಂಗಳೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟ–2025” ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ವಿವಿಧ ಕ್ರೀಡೆಗಳಲ್ಲಿ ಪ್ರಶಸ್ತಿ ಪಡೆದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಹುಮಾನ ವಿತರಿಸಿದರು.
ಕ್ರೀಡಾ ಮೀಸಲಾತಿಯ ಸದುಪಯೋಗ ಪಡೆದು ಅನೇಕ ಉದ್ಯೋಗಾವಕಾಶಗಳ ದಾರಿಗಳು ತೆರೆದಿದ್ದು, ಈಗಾಗಲೇ ಹಲವು ಯುವಕರು ಪಿಎಸ್ಐ, ಪೇದೆ ಮತ್ತು ಇತರೆ ಹುದ್ದೆಗಳಲ್ಲಿ ಸೇವೆ ಆರಂಭಿಸಿದ್ದಾರೆ. ಈ ಪೈಕಿ ಪೊಲೀಸ್ ಕುಟುಂಬದಿಂದ ಬಂದ ಮಕ್ಕಳಿಗೂ ಇದೀಗ ಸಿಇಟಿ ಮೂಲಕ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಘೋಷಿಸಿದರು.
“ಕ್ರೀಡೆ ದೈಹಿಕ ಶಕ್ತಿಯಷ್ಟೇ ಅಲ್ಲ, ಮಾನಸಿಕ ದೃಢತೆಯನ್ನೂ ಒದಗಿಸುತ್ತದೆ. ಜೀವನದಲ್ಲಿ ಜಯ-ಪರಾಜಯ ಸಾಮಾನ್ಯ. ಸೋಲಿನಲ್ಲೂ ನಿರಾಶರಾಗದೇ ಮುಂದೆ ನಡೆಯಲು ಕ್ರೀಡೆ ನೆರವಾಗುತ್ತದೆ,” ಎಂದು ಅವರು ಹೇಳಿದರು.
ರಾಜ್ಯದ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ ಡಾ. ಪರಮೇಶ್ವರ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ರಾಜ್ಯ ಪೊಲೀಸರು ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
“ಯಾವುದೇ ಘಟನೆ ನಡೆದಾಗ ಟೀಕೆಗಳೂ ಬರುತ್ತವೆ. ಆ ಟೀಕೆಗಳು ನಮ್ಮ ಸಾಮರ್ಥ್ಯವನ್ನು ಇನ್ನಷ್ಟು ಚಾಟುವಂತೆ ಮಾಡುತ್ತವೆ. ಟೀಕೆಯನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಕೆಲಸದ ಮೂಲಕ ಹೊಣೆಗಾರಿಕೆಯನ್ನು ನಿರ್ವಹಿಸುವುದು ನಮ್ಮ ಕರ್ತವ್ಯ,” ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ. ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಜಂಟಿ ಪೊಲೀಸ್ ಆಯುಕ್ತರು ಮತ್ತು ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.


